ಉಡುಪಿ, ಮಾ. 18: ವಾಣಿಜ್ಯ ಅನಿಲ ಸಿಲಿಂಡರ್ ಕೊರತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್ ವಂಚಕರು, ‘ಗ್ಯಾಸ್ ಬುಕ್ ಮಾಡಿದರೆ ತಕ್ಷಣ ಸಿಲಿಂಡರ್ ಸಿಗುತ್ತದೆ’, ‘ಒಟಿಪಿ ನೀಡಿದರೆ ಮನೆಗೆ ತಲುಪುತ್ತದೆ’ ಎಂಬ ರೀತಿಯ ನಕಲಿ ಸಂದೇಶಗಳನ್ನು ಜನರ ಮೊಬೈಲ್ಗಳಿಗೆ ಕಳುಹಿಸುತ್ತಿರುವುದು ಗಮನಕ್ಕೆ ಬಂದಿದೆ.
ಇಂತಹ ಸಂದೇಶಗಳು ಮೊಬೈಲ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದರೆ ತಕ್ಷಣ ನಂಬದೇ, ಸೂಕ್ತವಾಗಿ ಪರಿಶೀಲಿಸಿ ಮುಂದುವರಿಯುವುದು ಅಗತ್ಯ. ಅಜಾಗರೂಕತೆ ವಂಚನೆಗೆ ಕಾರಣವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಸಾಮಾನ್ಯವಾಗಿ ವಂಚಕರು ಗ್ಯಾಸ್ ಏಜೆನ್ಸಿ ಅಥವಾ ಕಂಪನಿಗಳ ಹೆಸರಿನಲ್ಲಿ ಕರೆ ಮಾಡಿ ಅಥವಾ ಸಂದೇಶ ರವಾನಿಸಿ ಗ್ರಾಹಕರಿಂದ ಒಟಿಪಿ ಪಡೆಯಲು ಪ್ರಯತ್ನಿಸುತ್ತಾರೆ. ತ್ವರಿತವಾಗಿ ಸಿಲಿಂಡರ್ ದೊರೆಯುತ್ತದೆ ಎಂಬ ನೆಪದಲ್ಲಿ ಒಟಿಪಿ ಹಂಚಿಕೊಂಡರೆ, ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಯಿಂದ ಹಣ ಕಳವು ಆಗುವ ಸಾಧ್ಯತೆ ಇದೆ.
ಗ್ಯಾಸ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಅಧಿಕೃತ ಕಂಪನಿಗಳು ಗ್ರಾಹಕರಿಂದ ಒಟಿಪಿ ಕೇಳುವುದಿಲ್ಲ. ಆದ್ದರಿಂದ ಬುಕ್ಕಿಂಗ್ಗಾಗಿ ಅಧಿಕೃತ ಮೊಬೈಲ್ ಅಪ್ಲಿಕೇಶನ್, ವೆಬ್ಸೈಟ್ ಅಥವಾ ನೋಂದಾಯಿತ ದೂರವಾಣಿ ಸಂಖ್ಯೆಗಳನ್ನೇ ಬಳಸಬೇಕು.
ಇತ್ತೀಚೆಗೆ ವಂಚಕರು ನಕಲಿ ಲಿಂಕ್ಗಳು, ಅಪ್ಲಿಕೇಶನ್ಗಳು ಹಾಗೂ ಎಪಿಕೆ ಫೈಲ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಾರೆ. ಇವುಗಳನ್ನು ಕ್ಲಿಕ್ ಮಾಡುವುದು ಅಥವಾ ಡೌನ್ಲೋಡ್ ಮಾಡುವುದು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಈ ಬಗ್ಗೆ ಸಾರ್ವಜನಿಕರು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ಮುನ್ನೆಚ್ಚರಿಕಾ ಕ್ರಮಗಳು:
ಅಪರಿಚಿತ ಸಂಖ್ಯೆಯಿಂದ ಬಂದ ಗ್ಯಾಸ್ ಸಂಬಂಧಿತ ಸಂದೇಶಗಳನ್ನು ನಂಬಬೇಡಿ
ಒಟಿಪಿ ಅಥವಾ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ
ಗ್ಯಾಸ್ ಕಂಪನಿ ಹೆಸರಿನಲ್ಲಿ ಬಂದ ಕರೆಗಳನ್ನು ಪರಿಶೀಲಿಸಿ ಮಾತ್ರ ನಂಬಿ
ಅಪರಿಚಿತ ಮೂಲಗಳಿಂದ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಬೇಡಿ
ಬ್ಯಾಂಕ್ ವ್ಯವಹಾರಗಳನ್ನು ನಿಯಮಿತವಾಗಿ ಪರಿಶೀಲಿಸಿ
ಮೋಸದ ಅನುಮಾನ ಬಂದ ತಕ್ಷಣ ಬ್ಯಾಂಕ್ ಹಾಗೂ ಸೈಬರ್ ಕ್ರೈಂ ಸಹಾಯವಾಣಿಗೆ ಮಾಹಿತಿ ನೀಡಿ
ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನು ಪರಿಶೀಲನೆ ಇಲ್ಲದೆ ನಂಬಬೇಡಿ
ಸಾರ್ವಜನಿಕರು ಎಚ್ಚರಿಕೆಯಿಂದ ಇದ್ದರೆ ಇಂತಹ ಸೈಬರ್ ವಂಚನೆಗಳಿಂದ ದೂರವಿರಬಹುದು ಎಂದು ಪೊಲೀಸರು ಸಲಹೆ ನೀಡಿದ್ದಾರೆ.







