ಉಡುಪಿ: ಫೆಬ್ರವರಿ 04:ಮಸ್ಕತ್ನಲ್ಲಿ ಲಾಟರಿ ಖರೀದಿಸಿ, 49 ಕೋಟಿ ರೂಪಾಯಿ ಬಹುಮಾನ ಗೆದ್ದಿರುವ ಸುದ್ದಿ ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
ಉದ್ಯಾವರ ಗ್ರಾಮದ ಮೂವತ್ತರ ಹರೆಯದ ಶಂತನು ಶೆಟ್ಟಿಗಾರ್ ಅವರು ಈ ಬೃಹತ್ ಮೊತ್ತದ ಲಾಟರಿಯನ್ನು ಗೆದ್ದ ಅದೃಷ್ಟಶಾಲಿ. ವಿದೇಶದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಶಂತನು, ಮಸ್ಕತ್ನಲ್ಲಿ ಲಾಟರಿ ಖರೀದಿಸಿದ್ದರು ಎನ್ನಲಾಗಿದೆ.
ಶಂತನು ಶೆಟ್ಟಿಗಾರ್ ಅವರು ಮಾಜಿ ಕೇಂದ್ರ ಸಚಿವ ದಿವಂಗತ ಆಸ್ಕರ್ ಫೆರ್ನಾಂಡೀಸ್ ಅವರ ಕಾರ್ಯದರ್ಶಿಯಾಗಿದ್ದ ಕಾಂಗ್ರೆಸ್ ಮುಖಂಡ ಉದ್ಯಾವರ ನಾಗೇಶ್ ಕುಮಾರ್ ಅವರ ಸಹೋದರರ ಪುತ್ರರಾಗಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಉದ್ಯಾವರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸಂತಸ, ಅಭಿನಂದನೆಗಳ ಸುರಿಮಳೆ ಹರಿದುಬರುತ್ತಿದೆ. ಗ್ರಾಮಸ್ಥರು ಮತ್ತು ಸ್ನೇಹಿತರು ಶಂತನು ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ವಿದೇಶದಲ್ಲಿ ದುಡಿದು, ಅದೃಷ್ಟದ ಬಾಗಿಲು ತೆರೆದ ಶಂತನು ಶೆಟ್ಟಿಗಾರ್ ಅವರ ಈ ಸಾಧನೆ, ಅನೇಕ ಯುವಕರಿಗೆ ಪ್ರೇರಣೆಯಾಗಿದೆ






