ಉಡುಪಿ, ಮಾ. 18: ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಕೊರತೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 150ಕ್ಕೂ ಹೆಚ್ಚು ಹೊಟೇಲ್ಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ ಎಂದು ಜಿಲ್ಲಾ ಹೊಟೇಲ್ ಮಾಲಕರ ಸಂಘ ತಿಳಿಸಿದೆ.
ಕಳೆದ ಕೆಲವು ದಿನಗಳಿಂದ ಗ್ಯಾಸ್ ಅಭಾವದ ನಡುವೆ ಅನೇಕ ಹೊಟೇಲ್ಗಳು ಕುಚ್ಚಲಕ್ಕಿ ಅನ್ನ, ದೋಸೆ ಸೇರಿದಂತೆ ಹಲವು ತಿಂಡಿಗಳನ್ನು ಕಡಿತಗೊಳಿಸಿ ಸೀಮಿತ ಸೇವೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದಂತೆ ಇದೀಗ ಅನೇಕ ಹೊಟೇಲ್ಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಿದೆ.
ಗ್ಯಾಸ್ ಪೂರೈಕೆ ಕೊರತೆಯಿಂದ ಅನಿವಾರ್ಯವಾಗಿ ಹೊಟೇಲ್ ಬಂದ್ ಮಾಡಲಾಗಿದೆ ಎಂಬ ಸೂಚನಾ ಫಲಕಗಳನ್ನು ಮಾಲಕರು ಅಳವಡಿಸಿದ್ದು, ಬೇಡಿಕೆಗೆ ಅನುಗುಣವಾಗಿ ಸಿಲಿಂಡರ್ ಲಭ್ಯವಾದ ಬಳಿಕವೇ ಪುನಃ ಕಾರ್ಯಾರಂಭ ಸಾಧ್ಯವೆಂದು ತಿಳಿಸಿದ್ದಾರೆ.
ಕೆಲವು ಹೊಟೇಲ್ಗಳು ಪರ್ಯಾಯವಾಗಿ ಕಟ್ಟಿಗೆ ಬಳಸಿ ಅಡುಗೆ ಮಾಡಲು ಯತ್ನಿಸುತ್ತಿದ್ದರೂ, ಕಾರ್ಮಿಕರ ಕೊರತೆ ಹಾಗೂ ಕಟ್ಟಿಗೆ ಲಭ್ಯತೆಯ ಸಮಸ್ಯೆ ಅಡ್ಡಿಯಾಗುತ್ತಿದೆ. ನಗರ ಪ್ರದೇಶಗಳಲ್ಲಿ ಕಟ್ಟಿಗೆ ಮಾರಾಟಗಾರರ ಸಂಖ್ಯೆ ಕಡಿಮೆಯಾಗಿರುವುದರಿಂದ ಪೂರೈಕೆ ತೀರಾ ಅಪರ್ಯಾಪ್ತವಾಗಿದೆ.
ಇನ್ನೊಂದೆಡೆ, ಕಟ್ಟಿಗೆಗೆ ಬೇಡಿಕೆ ಭಾರೀ ಏರಿಕೆಯಾಗಿದ್ದು, ಕೆಲವು ವಾರಗಳ ಹಿಂದೆ ದಿನಕ್ಕೆ 2ರಿಂದ 3 ಸಾವಿರ ರೂಪಾಯಿ ಮೌಲ್ಯದ ಕಟ್ಟಿಗೆ ಮಾತ್ರ ಮಾರಾಟವಾಗುತ್ತಿದ್ದರೆ, ಇದೀಗ 10 ಸಾವಿರ ರೂಪಾಯಿಗೂ ಮೀರಿದ ವ್ಯವಹಾರ ನಡೆಯುತ್ತಿದೆ ಎಂದು ತೆಂಕಪೇಟೆಯ ವ್ಯಾಪಾರಿ ಮನೋಜ್ ತಿಳಿಸಿದ್ದಾರೆ. ಹಲವರು ಟನ್ಗಟ್ಟಲೆ ಕಟ್ಟಿಗೆಗೆ ಮುಂಗಡ ಬುಕ್ಕಿಂಗ್ ಮಾಡಿದ್ದರೂ, ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲವೆಂದೂ ಅವರು ತಿಳಿಸಿದ್ದಾರೆ.







