ಉಡುಪಿ, ಮಾ. 18: ಚಿನ್ನದ ದರ ಏರಿಕೆಯಿಂದಲೇ ಸಂಕಷ್ಟದಲ್ಲಿರುವ ಚಿನ್ನಾಭರಣ ತಯಾರಿಕಾ ಕ್ಷೇತ್ರಕ್ಕೆ ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಕೊರತೆ ಹೊಸ ತಲೆನೋವಾಗಿದ್ದು, ಉತ್ಪಾದನಾ ಚಟುವಟಿಕೆಗಳು ಅಸ್ತವ್ಯಸ್ತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಇಂದಿನ ಆಧುನಿಕ ಚಿನ್ನಾಭರಣ ತಯಾರಿಕಾ ಘಟಕಗಳು ಸಂಪೂರ್ಣವಾಗಿ ಅನಿಲದ ಮೇಲೆ ಅವಲಂಬಿತವಾಗಿವೆ. ಹಿಂದೆ ಬಳಸುತ್ತಿದ್ದ ‘ಪೆರಫಿನ್ ವ್ಯಾಕ್ಸ್’ ವಿಧಾನಕ್ಕೆ ಬದಲಾಗಿ ಈಗ ಪೈಪ್ಲೈನ್ ಅಥವಾ ಸಿಲಿಂಡರ್ಗಳ ಮೂಲಕ ಅನಿಲ ಪೂರೈಕೆಯೇ ಮುಖ್ಯ ಆಧಾರವಾಗಿದೆ. ಚಿನ್ನ ಕರಗಿಸುವುದು, ವಿನ್ಯಾಸಗೊಳಿಸುವುದು ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಉಷ್ಣತೆಯ ಅಗತ್ಯವಿರುವುದರಿಂದ ಗ್ಯಾಸ್ ಅನಿವಾರ್ಯವಾಗಿದೆ. ಸಾಮಾನ್ಯವಾಗಿ ಎರಡು-ಮೂರು ದಿನಗಳಿಗೊಮ್ಮೆ ಸಿಲಿಂಡರ್ ಬದಲಾಯಿಸುವ ಅವಶ್ಯಕತೆ ಇದ್ದರೂ, ಪ್ರಸ್ತುತ ಪೂರೈಕೆಯಲ್ಲಿ ಉಂಟಾದ ವ್ಯತ್ಯಯ ತಯಾರಕರಲ್ಲಿ ಆತಂಕ ಹುಟ್ಟಿಸಿದೆ.
ಉತ್ಪಾದನೆಗೆ ಅಡ್ಡಿ
ಚಿನ್ನದ ಬೆಲೆ ಏರಿಕೆಯ ಪರಿಣಾಮವಾಗಿ ಈಗಾಗಲೇ ಮಾರುಕಟ್ಟೆಯಲ್ಲಿ ಉತ್ಪಾದನೆ ಕುಂಠಿತಗೊಂಡಿದೆ. ಇದರ ನಡುವೆ ಗ್ಯಾಸ್ ಕೊರತೆ ಮುಂದುವರಿದರೆ ತಯಾರಿಕಾ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ವ್ಯಕ್ತವಾಗಿದೆ. ಇದರಿಂದ ಉದ್ಯಮದ ಜೊತೆಗೆ ಸಾವಿರಾರು ಕಾರ್ಮಿಕರ ಉದ್ಯೋಗಕ್ಕೂ ಧಕ್ಕೆಯಾಗುವ ಭೀತಿ ಇದೆ ಎಂದು ಉದ್ಯಮ ವಲಯ ಎಚ್ಚರಿಸಿದೆ.
ತಕ್ಷಣ ಕ್ರಮಕ್ಕೆ ಒತ್ತಾಯ
ಚಿನ್ನದ ದರ ಏರಿಕೆಯಿಂದ ಉತ್ಪಾದನೆ ಕುಸಿದಿರುವ ಈ ಸಮಯದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಲಭ್ಯತೆಯ ಕೊರತೆ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಆದ್ದರಿಂದ ಸರ್ಕಾರ ಹಾಗೂ ಸಂಬಂಧಿತ ಇಲಾಖೆ ತಕ್ಷಣ ಕ್ರಮ ಕೈಗೊಂಡು ಗ್ಯಾಸ್ ಪೂರೈಕೆಯನ್ನು ಸುಗಮಗೊಳಿಸಬೇಕು ಎಂದು ಗುಜ್ಜಾಡಿ ಸ್ವರ್ಣ ಜುವೆಲರ್ಸ್ನ ಗುಜ್ಜಾಡಿ ರಾಮದಾಸ ನಾಯಕ್ ಮನವಿ ಮಾಡಿದ್ದಾರೆ.







