ಬೆಳ್ತಂಗಡಿ, ಮಾ. 4: ಹಲವು ದಿನಗಳಿಂದ ಸಾರ್ವಜನಿಕ ರಸ್ತೆಗಳ ಮೇಲೆ ಬೈಕ್ನಲ್ಲಿ ಅಪಾಯಕಾರಿ ಕಸರತ್ತು ನಡೆಸಿ, ಅದರ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ಯುವಕನನ್ನು ಬೆಳ್ತಂಗಡಿ ಸಂಚಾರ ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ.
ಉಜಿರೆ ಗ್ರಾಮದ ನೂಜಿಲ ನಿವಾಸಿ ಸಂಪತ್ (30) ಬಂಧಿತ ಆರೋಪಿ. ಇತ್ತೀಚೆಗೆ ಉಜಿರೆ ಜಂಕ್ಷನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಪೊಲೀಸ್ ಸಿಬ್ಬಂದಿ ಡ್ಯಾನಿ ಫ್ರಾನ್ಸಿಸ್ ತಾವೋ ಅವರ ಕಣ್ಣೆದುರೇ ಆರೋಪಿ ವೀಲಿಂಗ್ ಮಾಡುತ್ತಾ ಧರ್ಮಸ್ಥಳ ರಸ್ತೆಯತ್ತ ವೇಗವಾಗಿ ತೆರಳಿದ್ದನು ಎನ್ನಲಾಗಿದೆ.
ಈ ಘಟನೆ ಕುರಿತು ಪೊಲೀಸರು ವರದಿ ದಾಖಲಿಸಿಕೊಂಡಿದ್ದು, ಆರೋಪಿ ವಿವಿಧ ಪ್ರದೇಶಗಳಲ್ಲಿ ಸಂಚಾರ ನಿಯಮಗಳನ್ನು ಲೆಕ್ಕಿಸದೆ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ನಡೆಸಿ ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿರುವ ಮಾಹಿತಿ ಸಹ ಲಭ್ಯವಾಗಿತ್ತು.
ಈ ಹಿನ್ನಲೆಯಲ್ಲಿ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಕಿಶೋರ್ ಕುಮಾರ್ ಪಿ. ಅವರ ನೇತೃತ್ವದ ತಂಡ ಮಾರ್ಚ್ 2ರಂದು ಕಾರ್ಯಾಚರಣೆ ನಡೆಸಿ, ಬೈಕ್ ಸಮೇತ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.







