ಪುತ್ತೂರು, ಮಾ. 4: ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ದರ್ಬೆ ಬಳಿ ವ್ಯಕ್ತಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂರ್ನಡ್ಕ ನಿವಾಸಿ ಅಬ್ದುಲ್ ಹಕೀಂ ಅವರು ಈ ಕುರಿತು ದೂರು ನೀಡಿದ್ದಾರೆ. ದರ್ಬೆ ಪ್ರದೇಶದಲ್ಲಿ ಕಾರು ನಿಲ್ಲಿಸಿದ್ದ ಅವರು, ರಿಕ್ಷಾ ಚಾಲಕರ ನಡುವೆ ಉಂಟಾದ ವಾಗ್ವಾದವನ್ನು ಸಮಾಧಾನಪಡಿಸಿ ಹಿಂದಿರುಗುವ ವೇಳೆ, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿ ಪಿಸ್ತೂಲ್ ಪ್ರದರ್ಶಿಸಿ ಬೆದರಿಕೆ ಹಾಕಿದನೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಹಕೀಂ ಹಾಗೂ ಇತರರು ಸೇರಿ ಆತನನ್ನು ಹಿಡಿಯಲು ಮುಂದಾದಾಗ, ಆರೋಪಿ ಬೈಕ್ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.







