ಕಾರ್ಕಳ: ನಿಟ್ಟೆ ಗ್ರಾಮದ ಹೋಟೆಲ್ ಒಂದರಲ್ಲಿ ಹಣವನ್ನು ಪಣಕ್ಕಿಟ್ಟು ಇಸ್ಪೀಟು ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕಾರ್ಕಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಆರು ಮಂದಿಯನ್ನು ಬಂಧಿಸಿದ್ದಾರೆ.
ಆಗಸ್ಟ್ 4ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ಹೋಟೆಲ್ ಸನ್ಮಾನ್ ರೆಸಿಡೆಸ್ಸಿಗೆ ದಾಳಿ ನಡೆಸಿದ ವೇಳೆ ಜುಗಾರಿ ಆಡುತ್ತಿದ್ದ ಸುಜೀತ್, ಅಭಿಮನ್ಯು, ಮಹೇಶ್, ಧೀರಜ್, ನರೇಶ್ ಕುಮಾರ್ ಹಾಗೂ ಪ್ರಶಾಂತ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಯಶೋಧರ (ಅಣ್ಣು), ನೂರು ಮಹಮ್ಮದ್, ರವಿ ಶೆಟ್ಟಿ ಮತ್ತು ಸತೀಶ್ ಎಂಬ ನಾಲ್ವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಜುಗಾರಿಗೆ ಬಳಸಿದ್ದ ₹16,350 ನಗದು, ಇಸ್ಪೀಟ್ ಎಲೆಗಳು, 7 ಮೊಬೈಲ್ ಫೋನ್ಗಳು ಹಾಗೂ ಖುರ್ಚಿ ಮತ್ತು ಇತರ ಪೀಠೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಅಂದಾಜು ಮೌಲ್ಯ ಸುಮಾರು ₹43,850 ಎಂದು ತಿಳಿದುಬಂದಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ l ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಹಾಗೂ ಜುಗಾರಿ ನಡೆಸಲು ಅವಕಾಶ ಕಲ್ಪಿಸಿದ ನಿಟ್ಟೆ ಗ್ರಾಮದ ಹೋಟೆಲ್ ಸನ್ಮಾನ್ ರೆಸಿಡೆಸ್ಸಿಯ ಮಾಲೀಕರಿಗಾಗಿ ಪೊಲೀಸರು ಮುಂದಿನ ತನಿಖೆ ಮತ್ತು ಶೋಧ ಕಾರ್ಯ ಮುಂದುವರೆಸಿದ್ದಾರೆ.






