ಮಣಿಪಾಲ, ಆಗಸ್ಟ್ 4, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು, ಬದಲಾಗುತ್ತಿರುವ ಜಗತ್ತಿನಲ್ಲಿ ಸಾಂಕ್ರಾಮಿಕ ರೋಗಗಳ ಸವಾಲನ್ನು ಎದುರಿಸುವ ಕುರಿತು ಮಣಿಪಾಲದಲ್ಲಿ ಮೂರು ದಿನಗಳ ಅಂತರರಾಷ್ಟೀಯ ಸಮಾವೇಶ ‘ನೇಚರ್ ಕಾನ್ಫರೆನ್ಸ್’ ಅನ್ನು ಅಕ್ಟೋಬರ್ 14 ರಿಂದ 16ರವರೆಗೆ ಹಮ್ಮಿಕೊಂಡಿದೆ.
ನೇಚರ್ ಮೆಡಿಸಿನ್, ನೇಚರ್ ಮೈಕ್ರೋಬಯಾಲಜಿ, ನೇಚರ್ ಹೆಲ್ತ್, ನೇಚರ್ ಕಮ್ಯುನಿಕೇಷನ್ಸ್ ಮತ್ತು ಮಾಹೆಯ ಸಹಯೋಗದಲ್ಲಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಸಾಂಕ್ರಾಮಿಕ ರೋಗಗಳ ಸಂಶೋಧನೆ, ಆವಿಷ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಜಾಗತಿಕ ಮಟ್ಟದ ತಜ್ಞರು, ಸಂಶೋಧಕರು, ವೈದ್ಯರು, ನೀತಿ ನಿರೂಪಕರು ಮತ್ತು ಉದ್ಯಮದ ನಾಯಕರಿಗೆ ಈ ಸಮ್ಮೇಳನವು ಜಾಗತಿಕ ವೇದಿಕೆಯನ್ನು ಕಲ್ಪಿಸಲಿದೆ.
ಮೂರು ದಿನಗಳ ಕಾಲ ನಡೆಯುವ ಈ ಮಹತ್ವದ ಸಮ್ಮೇಳನದಲ್ಲಿ ಹೊಸದಾಗಿ ಕಾಣಿಸಿಕೊಳ್ಳುವ ರೋಗಕಾರಕಗಳು, ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್, ಸಾಂಕ್ರಾಮಿಕ ರೋಗಗಳನ್ನು ಎದುರಿಸುವ ಸಿದ್ಧತೆ, ರೋಗಗಳ ಕಣ್ಗಾವಲು, ರೋಗನಿರ್ಣಯ, ಚಿಕಿತ್ಸಾ ವಿಧಾನಗಳು, ಲಸಿಕಾ ಕಾರ್ಯತಂತ್ರಗಳು ಮತ್ತು ‘ಒನ್ ಹೆಲ್ತ್’ ವಿಧಾನಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಗುವುದು. ಜಾಗತಿಕ ಆರೋಗ್ಯ ಸಂಶೋಧನೆಯಲ್ಲಿ ಭಾರತದ ಪ್ರಭಾವ ಬೆಳೆಯುತ್ತಿರುವುದರಿಂದ, ಭಾರತೀಯ ವಿಜ್ಞಾನಿಗಳು, ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಪರಿಣತರೊಂದಿಗೆ ಬೆರೆಯಲು ಹಾಗೂ ದೇಶದ ವೈಜ್ಞಾನಿಕ ಸಾಧನೆಗಳನ್ನು ಪ್ರದರ್ಶಿಸಲು ಈ ಸಮ್ಮೇಳನವು ಉತ್ತಮ ಅವಕಾಶವಾಗಿದೆ.
ಪೂರ್ವಭಾವಿಯಾಗಿ ಸಮ್ಮೇಳನದ ಕುರಿತು ಮಾತನಾಡಿದ ‘ನೇಚರ್ ಕಮ್ಯುನಿಕೇಷನ್ಸ್’ನ ಹಿರಿಯ ಸಂಪಾದಕಿ ಸೋಂಜಾ ಸ್ಮಿಡ್, “ಸಾಂಕ್ರಾಮಿಕ ರೋಗಗಳು ಪ್ರಸ್ತುತ ಜಾಗತಿಕ ಆರೋಗ್ಯದ ಅತಿದೊಡ್ಡ ಸವಾಲಾಗಿವೆ. ಹವಾಮಾನ ಬದಲಾವಣೆ, ಆಂಟಿಮೈಕ್ರೋಬಿಯಲ್ ಪ್ರತಿರೋಧದಂತಹ ಹಲವು ಅಂಶಗಳು ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿವೆ. ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ, ನಿಖರ ರೋಗನಿರ್ಣಯ ಮತ್ತು ಸೂಕ್ತ ಚಿಕಿತ್ಸಾ ವಿಧಾನಗಳ ಭವಿಷ್ಯವನ್ನು ರೂಪಿಸಲು ಹಾಗೂ ಹೊಸ ಆವಿಷ್ಕಾರಗಳ ಮೂಲಕ ಪರಿಹಾರ ಕಂಡುಕೊಳ್ಳಲು ವಿವಿಧ ಶಿಸ್ತುಗಳ ಪರಿಣತರನ್ನು ಒಂದೆಡೆ ಸೇರಿಸುವಲ್ಲಿ ಈ ಸಮ್ಮೇಳನ ಪ್ರಮುಖ ಪಾತ್ರ ವಹಿಸಲಿದೆ” ಎಂದು ತಿಳಿಸಿದರು.
‘ನೇಚರ್ ಹೆಲ್ತ್’ನ ಹಿರಿಯ ಸಂಪಾದಕ ಲೊರೆಂಜೊ ರಿಘೆಟ್ಟೊ ಮಾತನಾಡಿ, ‘ಈಗಾಗಲೇ ಇರುವ ಹಾಗೂ ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ರೋಗಕಾರಕಗಳಿಂದ ಉಂಟಾಗುವ ಸಾಂಕ್ರಾಮಿಕ ಸ್ವರೂಪದ ಸವಾಲುಗಳನ್ನು ಎದುರಿಸಲು ನವೀನ ಮತ್ತು ಪ್ರಾಯೋಗಿಕ ಪರಿಹಾರಗಳ ತೀವ್ರ ಅಗತ್ಯವಿದೆ. ಅರ್ಥಪೂರ್ಣ ವೈಜ್ಞಾನಿಕ ಸಂವಾದಗಳಿಗೆ ನಾಂದಿ ಹಾಡುವಲ್ಲಿ ಈ ಸಮ್ಮೇಳನ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ನಮ್ಮದಾಗಿದೆ’ ಎಂದರು.
ಮಾಹೆ ಉಪಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, ‘ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ರೋಗಕಾರಕಗಳು ಮತ್ತು ಆಂಟಿಮೈಕ್ರೋಬಿಯಲ್ ಪ್ರತಿರೋಧದಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ಪರಸ್ಪರ ಸಹಕಾರ ಮತ್ತು ಬಹುಶಿಸ್ತೀಯ ಪರಿಹಾರಗಳ ಅಗತ್ಯವಿದೆ. ಪ್ರಪಂಚದಾದ್ಯಂತದ ತಜ್ಞರನ್ನು ಒಟ್ಟುಗೂಡಿಸುವ ಈ ಜಾಗತಿಕ ಸಂವಾದಕ್ಕೆ ಆತಿಥ್ಯ ವಹಿಸುತ್ತಿರುವ ಬಗ್ಗೆ ಮಾಹೆಗೆ ಹೆಮ್ಮೆಯಿದೆ.’ ಎಂದು ಹೇಳಿದರು.
ಈ ಸಮ್ಮೇಳನದಲ್ಲಿ ಭಾಷಣಗಳು, ಪ್ಯಾನೆಲ್ ಚರ್ಚೆಗಳು ಹಾಗೂ ಪೋಸ್ಟರ್ ಪ್ರಸ್ತುತಿಗಳು ನಡೆಯಲಿದ್ದು, ಪ್ರಮುಖವಾಗಿ ರೋಗಗಳ ಕಣ್ಗಾವಲು, ಎಎಂಆರ್, ಲಸಿಕಾ ತಂತ್ರಜ್ಞಾನ, ಹವಾಮಾನ ಬದಲಾವಣೆ ಮತ್ತು ಸಾಂಕ್ರಾಮಿಕ ರೋಗಗಳನ್ನು ಎದುರಿಸುವ ಸಿದ್ಧತೆಯ ಕುರಿತು ಗಂಭೀರ ಚರ್ಚೆಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಅಲೆಸ್ಸಾಂಡ್ರೊ ವೆಸ್ಪಿಗ್ನಾನಿ, ಇಲೈನ್ ಎನ್ಸೋಸಿ, ಲಾರೆನ್ ಗಾರ್ಡ್ನರ್ (ಅಮೆರಿಕ), ಮಧುಕರ್ ಪೈ (ಕೆನಡಾ), ಶಬೀರ್ ಎ. ಮಧಿ (ದಕ್ಷಿಣ ಆಫ್ರಿಕಾ) ಮತ್ತು ಮರಿಯನ್ ಕೂಪ್ಮನ್ಸ್ (ನೆದರ್ಲ್ಯಾಂಡ್ಸ್) ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ತಜ್ಞರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.
ದೇಶ-ವಿದೇಶಗಳ ಸಂಶೋಧಕರಿಗೆ ತಮ್ಮ ಪ್ರಬಂಧಗಳನ್ನು ಸಲ್ಲಿಸಲು ಆಹ್ವಾನಿಸಲಾಗಿದೆ. ಆಯ್ಕೆಯಾದವುಗಳನ್ನು ಸಮ್ಮೇಳನದಲ್ಲಿ ಸೇರಿಸಲಿದ್ದು, ನಾಲ್ಕು ಅತ್ಯುತ್ತಮ ಪ್ರಬಂಧಗಳಿಗೆ ಮೌಖಿಕ ಪ್ರಸ್ತುತಿಯ ಅವಕಾಶ ಸಿಗಲಿದೆ. ಆಸಕ್ತ ಸಂಶೋಧಕರು, ವೈದ್ಯಕೀಯ ವೃತ್ತಿಪರರು ಹಾಗೂ ವಿದ್ಯಾರ್ಥಿಗಳು ಈ ಮಹತ್ವದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಶೀಘ್ರವಾಗಿ ನೋಂದಾಯಿಸಿಕೊಳ್ಳುವಂತೆ ಪ್ರೋತ್ಸಾಹಿಸಲಾಗಿದೆ.
ಈ ಲಿಂಕ್ ಮೂಲಕ ನಿಮ್ಮ ಪ್ರಬಂಧ ಸಲ್ಲಿಕೆ ಮತ್ತು ನೋಂದಣಿ ಮಾಡಿಕೊಳ್ಳಬಹುದಾಗಿದೆ. https://submissions.conferences.nature.com/core/login







