ಪುಂಜಾಲಕಟ್ಟೆ, ಮಾ. 4: ಮನೆಮಂದಿ ಬೆಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಸಾವಿರಾರು ರೂಪಾಯಿ ನಗದು ದೋಚಿರುವ ಘಟನೆ ಕಾವಳಮೂಡೂರು ಗ್ರಾಮದ ಕೈಲಾರ್ನ ಇಬ್ರಾಹಿಂ ಕೈಲಾರ್ ಅವರ ಮನೆಯಲ್ಲಿ ನಡೆದಿದೆ.
ಇಬ್ರಾಹಿಂ ಅವರು ಫೆಬ್ರವರಿ 24ರಂದು ಬೆಳಗ್ಗೆ ಮಗಳ ನಿವಾಸಕ್ಕೆಂದು ಬೆಂಗಳೂರಿಗೆ ತೆರಳಿದ್ದರು. ತೆರಳುವ ಮೊದಲು ಸುಮಾರು 10 ಪವನಿನ ಚಿನ್ನದ ಸರ ಮತ್ತು ಸುಮಾರು 5¾ ಪವನ್ ತೂಕದ ಚಿನ್ನದ ನೆಕ್ಲೆಸ್ ಅನ್ನು ಒಂದು ಬೆಡ್ ರೂಮ್ನ ಕಪಾಟಿನಲ್ಲಿ ಇಟ್ಟಿದ್ದು, ಮತ್ತೊಂದು ಕೊಠಡಿಯ ಕಪಾಟಿನಲ್ಲಿ 60 ಸಾವಿರ ರೂ. ನಗದು ಸಂಗ್ರಹಿಸಿ ಮನೆಗೆ ಬೀಗ ಹಾಕಿ ಹೊರಟಿದ್ದರು ಎಂದು ತಿಳಿದುಬಂದಿದೆ.
ಫೆಬ್ರವರಿ 28ರಂದು ಬೆಳಗ್ಗೆ ಕಾವಳಕಟ್ಟೆ ಅಂಚೆ ಕಚೇರಿಯ ಪೋಸ್ಟ್ಮ್ಯಾನ್ ಆನಂದ ಅವರು ಪತ್ರ ನೀಡಲು ಮನೆಗೆ ಬಂದಾಗ, ಬಾಗಿಲು ಸ್ವಲ್ಪ ತೆರೆದಿರುವುದನ್ನು ಗಮನಿಸಿ ಇಬ್ರಾಹಿಂ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಬಳಿಕ ಅವರ ಸೂಚನೆಯಂತೆ ಪಕ್ಕದ ಮನೆಯವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ, ಮುಂಭಾಗದ ಬಾಗಿಲಿನ ಸೆಂಟರ್ ಲಾಕ್ ಮುರಿದಿರುವುದು ಪತ್ತೆಯಾಗಿದೆ.
ಸಂಜೆ ಮನೆಗೆ ವಾಪಸಾದ ಇಬ್ರಾಹಿಂ ಪರಿಶೀಲಿಸಿದಾಗ ಚಿನ್ನಾಭರಣ ಹಾಗೂ ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.







