ಮಂಗಳೂರು, ಮಾ.2 : ಅರೆಕಾಲಿಕ ಉದ್ಯೋಗದ ಆಮಿಷ ತೋರಿಸಿ ವಿದ್ಯಾರ್ಥಿಗಳನ್ನು ವಂಚಿಸಿದ ಆರೋಪದಡಿ ಕುದ್ರೋಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ವೆಕ್ಸಾನ್’ ಸಂಸ್ಥೆಯ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ಸಂಸ್ಥಾಪಕ ದಿಗ್ವಿಜಯ್ ದೇಸಾಯಿ, ಸಹ ಸಂಸ್ಥಾಪಕರಾದ ರಾಮಚಂದ್ರ ಶೆವಾಲೆ, ಸುನಿಲ್ ಸಾವಂತ್, ಅನನ್ ಅಹೈರ್ ಹಾಗೂ ಮಂಗಳೂರು ಶಾಖೆಯ ಸಿಬ್ಬಂದಿಗಳಾದ ಪಲ್ಲವಿ, ಅಂಜಲಿ, ನವ್ಯಾ, ನಿವಿಶ್, ಜಯಶ್ರೀ ಮತ್ತು ಜುನೈದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯೋಗದ ಹೆಸರಿನಲ್ಲಿ ತಪ್ಪು ಮಾಹಿತಿ ನೀಡಿ ನಂಬಿಕೆ ದ್ರೋಹ ಎಸಗಿರುವ ಆರೋಪ ಕೇಳಿಬಂದಿದೆ.
ದೂರು ಪ್ರಕಾರ, ಜನವರಿಯಲ್ಲಿ ನವ್ಯಾ ಎಂಬ ಮಹಿಳೆ ಸಂಪರ್ಕಿಸಿ, ಮಧ್ಯಾಹ್ನ 2ರಿಂದ 5 ಗಂಟೆಯವರೆಗೆ ಭಾಗಕಾಲಿಕವಾಗಿ ಕೆಲಸ ಮಾಡಿ ತಿಂಗಳಿಗೆ ₹15,000ರಿಂದ ₹30,000ರವರೆಗೆ ಆದಾಯ ಗಳಿಸಬಹುದು ಎಂದು ತಿಳಿಸಿದ್ದಾಳೆ. ಸಾಫ್ಟ್ವೇರ್ ಹಾಗೂ ಡೇಟಾ ಎಂಟ್ರಿ ಕೆಲಸ ನೀಡಲಾಗುವುದು ಎಂದು ಹೇಳಿ, ತರಬೇತಿ ಅವಧಿಯಲ್ಲಿ ವಸತಿ ಹಾಗೂ ಆಹಾರ ವ್ಯವಸ್ಥೆಗೆ ₹2,500 ಶುಲ್ಕ ಪಾವತಿಸಲು ಸೂಚಿಸಿದ್ದಾಳೆ.
ಇದನ್ನು ನಂಬಿದ ದೂರುದಾರೆ ₹2,500 ಪಾವತಿಸಿ ತರಬೇತಿಗೆ ಹಾಜರಾಗಿದ್ದಾರೆ. ಬಳಿಕ ಸಂಸ್ಥೆಯವರು ₹51,000 ಮೌಲ್ಯದ ವಿವಿಧ ಕಂಪನಿಗಳ ಉತ್ಪನ್ನಗಳನ್ನು ಖರೀದಿಸಬೇಕು ಹಾಗೂ ಇತರರನ್ನು ಸಂಸ್ಥೆಗೆ ಸೇರಿಸಿದರೆ ಕಮಿಷನ್ ಸಿಗುತ್ತದೆ ಎಂದು ತಿಳಿಸಿದ್ದಾರಂತೆ. ಅದರಂತೆ ನಿವೇಶ್ ಎಂಬವರ ಗೂಗಲ್ ಪೇ ಸಂಖ್ಯೆಗೆ ₹51,000 ವರ್ಗಾಯಿಸಲಾಗಿದೆ.
ಆದರೆ ನೀಡಿದ ವಸ್ತುಗಳು ಗುಣಮಟ್ಟವಿಲ್ಲದವಾಗಿದ್ದವು ಎಂದು ದೂರಿನಲ್ಲಿ ಹೇಳಲಾಗಿದೆ. ಅಲ್ಲದೆ, ಸಾಫ್ಟ್ವೇರ್ ಮತ್ತು ಡೇಟಾ ಎಂಟ್ರಿ ಕೆಲಸದ ಭರವಸೆ ನೀಡಿದರೂ, ನಂತರ ಇತರರನ್ನು ಸದಸ್ಯರನ್ನಾಗಿ ಸೇರಿಸಲು ಒತ್ತಡ ಹೇರುವ ಮೂಲಕ ಮನೋವೈಜ್ಞಾನಿಕವಾಗಿ ಪ್ರಭಾವಿತಗೊಳಿಸಿ, ಕೆಲ ದಾಖಲೆಗಳಿಗೆ ಸಹ ಬಲವಂತವಾಗಿ ಸಹಿ ಮಾಡಿಸಿಕೊಂಡಿರುವುದಾಗಿ ಆರೋಪಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.







