ಮಂಗಳೂರು, ಮಾ. 2: ಯಕ್ಷಗಾನ ಕಲಾವಿದರಿಬ್ಬರ ವಿರುದ್ಧ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣದಲ್ಲಿ ನಗರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಗಳನ್ನು ತಳ್ಳಿಹಾಕಿ ಖುಲಾಸೆ ತೀರ್ಪು ನೀಡಿದೆ.
‘ಕರ್ನಾಟಕ ಮೇಳ’ದ ‘ಬ್ರಹ್ಮ ಬಲಾಂಡಿ’ ಪ್ರಸಂಗವನ್ನು ಯಕ್ಷಗಾನ ಕಲಾವಿದ ಪೂರ್ಣೇಶ್ ಅವರು ಪುರಭವನದಲ್ಲಿ ಆಯೋಜಿಸಿದ್ದರು. ಈ ಪ್ರಸಂಗದ ಕರಪತ್ರಗಳಲ್ಲಿ, ರಚನೆಕಾರ ಅನಂತರಾಮ ಬಂಗಾಡಿ ಸೃಷ್ಟಿಸಿದ ಪಾತ್ರಗಳ ಹೆಸರನ್ನು ಮೂಲ ರೂಪದಲ್ಲೇ ಮುದ್ರಿಸಿ ಹಂಚಲಾಗಿತ್ತು. ಪಾತ್ರಗಳ ಹೆಸರಿನಲ್ಲಿ ಬಳಸಿದ ಕೆಲವು ಪದಗಳನ್ನು ಆಧಾರವಾಗಿಟ್ಟುಕೊಂಡು, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧ ಅವಮಾನಕಾರಿಯಾಗಿದ್ದು, ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ದಲಿತ ಸಂಘಟನೆಗಳ ಪ್ರಮುಖರು ಪೊಲೀಸರಿಗೆ ದೂರು ಸಲ್ಲಿಸಿದ್ದರು.
ದೂರಿನ ಮೇರೆಗೆ ಪೊಲೀಸರು ಪೂರ್ಣೇಶ್ ಹಾಗೂ ಮಿಜಾರು ತಿಮ್ಮಪ್ಪ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅತ್ಯಾಚಾರ ನಿರೋಧಕ) ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ವೇಳೆ ಸಾಕ್ಷ್ಯಾಧಾರಗಳು ಹಾಗೂ ವಾದ-ಪ್ರತಿವಾದಗಳನ್ನು ಪರಿಶೀಲಿಸಿದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಆರೋಪ ಸಾಬೀತಾಗಿಲ್ಲವೆಂದು ಕಂಡು ಇಬ್ಬರನ್ನೂ ದೋಷಮುಕ್ತಗೊಳಿಸಿ ತೀರ್ಪು ಪ್ರಕಟಿಸಿದರು. ಕಲಾವಿದರ ಪರವಾಗಿ ನ್ಯಾಯವಾದಿ ಶಶಿರಾಜ್ ರಾವ್ ಕಾವೂರು ವಾದ ಮಂಡಿಸಿದ್ದರು.







