ಬೆಳ್ತಂಗಡಿ,ಮಾ. 2: ಕಾಶಿಪಟ್ಟ ಗ್ರಾಮದ ಪಣಿಲಾಜೆಯಲ್ಲಿ ವೃದ್ಧೆಯೊಬ್ಬರನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ ಸ್ವಚ್ಛಗೊಳಿಸುವ ನೆಪದಲ್ಲಿ ವಂಚನೆ ಎಸಗಿದ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತನು ಬಿಹಾರ ರಾಜ್ಯದ ಸುಪೋಲ್ ಜಿಲ್ಲೆಯ ತ್ರಿವೇಣೆಗಂಜ್ ತಾಲೂಕಿನ ರಘುನಾಥಪುರ ನಿವಾಸಿ ಸೂರಜ್ ದೇವ್ ಮಂಡಲ್ ಅವರ ಪುತ್ರ ಚಂದನ್ ಕುಮಾರ್ (30) ಎಂದು ಗುರುತಿಸಲಾಗಿದೆ.
ಫೆ. 10ರಂದು ಬೆಳಗ್ಗೆ ಸುಮಾರು 11.15ರ ವೇಳೆಗೆ, 90 ವರ್ಷದ ರುಕ್ಕಿಣಿ ಶೆಟ್ಟಿಗಾರ್ ಅವರು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭವನ್ನು ಬಳಸಿಕೊಂಡು ಆರೋಪಿಯು ಮನೆಗೆ ಭೇಟಿ ನೀಡಿದ್ದಾನೆ. ಚಿನ್ನಾಭರಣಗಳನ್ನು ಹೊಳಪುಗೊಳಿಸುವುದಾಗಿ ಹೇಳಿ ವಿಶ್ವಾಸ ಗಳಿಸಿದ ಬಳಿಕ, ಲಾಕರ್ನಲ್ಲಿದ್ದ ಲಕ್ಷ್ಮೀ ಪದಕ ಜೋಡಿಸಲಾದ ಎರಡು ಮುಕ್ಕಾಲು ಪವನ್ ತೂಕದ ಚಿನ್ನದ ಸರವನ್ನು ಪಡೆದಿದ್ದಾನೆ.
ಅಂಗಳದಲ್ಲಿದ್ದ ನಳ್ಳಿಯಿಂದ ನೀರು ತೆಗೆದು ಬ್ರಷ್ ಬಳಸಿ ತೊಳೆಯುವ ನಾಟಕವಾಡಿದ ಆರೋಪಿಯು, ಬಳಿಕ ಸರವನ್ನು ಕಾಗದದಲ್ಲಿ ಸುತ್ತಿ ಫ್ಯಾನ್ ಗಾಳಿಯಲ್ಲಿ ಒಣಗಿಸಬೇಕೆಂದು ಹೇಳಿ ಸ್ಥಳದಿಂದ ತೆರಳಿದ್ದಾನೆ. ಕೆಲವೇ ಕ್ಷಣಗಳಲ್ಲಿ ಕಾಗದ ತೆರೆದು ನೋಡಿದಾಗ ಚಿನ್ನದ ಸರವು ಕರಗಿದಂತಿದ್ದು, ಅರಿಶಿನದ ಪುಡಿ ಹೋಲುವ ದ್ರವ್ಯ, ಸಣ್ಣ ತುಂಡುಗಳಾಗಿ ಬದಲಾಗಿದ ಭಾಗಗಳು ಹಾಗೂ ತಾಮ್ರ ಬಣ್ಣಕ್ಕೆ ತಿರುಗಿದ ಲಕ್ಷ್ಮೀ ಪದಕ ಕಾಣಿಸಿಕೊಂಡಿದೆ.
ಈ ಕುರಿತು ದಾಖಲಾದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿದರು. ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ. ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಎಸ್. ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಅಕ್ಷಯ್ ಡವಗಿ, ಓಮನಾ ಎನ್. ನೇತೃತ್ವದ ತಂಡ ಫೆ. 28ರಂದು ಮೂಡುಬಿದಿರೆಯ ಗಂಟಾಲ್ಕಟ್ಟೆ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ತನಿಖೆ ಮುಂದುವರಿದಿದೆ.







