ಉಡುಪಿ, ಫೆ.24: ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ತುರ್ತು ಕ್ರಮ ಕೈಗೊಳ್ಳುವಂತೆ ನಗರಸಭೆಯನ್ನು ಆಗ್ರಹಿಸಿದ್ದಾರೆ.
ಪ್ರತಿದಿನ ಸಾವಿರಾರು ಮಂದಿ ಸಂಚರಿಸುವ ಈ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು, ಆಸನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಕರ್ಯಗಳ ಕೊರತೆ ಕಾಡುತ್ತಿದೆ. ಕುಡಿಯುವ ನೀರಿನ ಘಟಕ ಶುದ್ಧತೆಯಿಲ್ಲದೆ ಇರುವುದರಿಂದ ಪ್ರಯಾಣಿಕರು ಹಣ ಪಾವತಿಸಿ ನೀರು ಖರೀದಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೆಲವೆಡೆ ಕುರ್ಚಿಗಳು ಹಾಳಾಗಿದ್ದು, ಸಮರ್ಪಕ ಆಸನ ವ್ಯವಸ್ಥೆಯಿಲ್ಲದೆ ವೃದ್ಧರು ಹಾಗೂ ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ.
ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಮಹಿಳಾ ಮತ್ತು ಪುರುಷರ ಪ್ರತ್ಯೇಕ ಶೌಚಾಲಯಗಳು ಸರಿಯಾಗಿ ನಿರ್ವಹಣೆ ಕಾಣದೆ ಬಳಕೆಗೆ ಅಸಮರ್ಪಕವಾಗಿವೆ. ಕಳಪೆ ಕಾಮಗಾರಿ ಹಾಗೂ ಅಸ್ವಚ್ಛತೆಯಿಂದ ಸುತ್ತಮುತ್ತ ದುರ್ವಾಸನೆ ವಾತಾವರಣ ಉಂಟಾಗಿದ್ದು, ನಿಲ್ದಾಣದಲ್ಲಿ ಕಾಯುವವರಿಗೂ ಅಸೌಕರ್ಯವಾಗುತ್ತಿದೆ.
ಇದಕ್ಕೂ ಮೀರಿಯಾಗಿ, ನಿಲ್ದಾಣದ ಆವರಣದಲ್ಲಿ ಧೂಳು ಮತ್ತು ಕಸದ ರಾಶಿಗಳು ಸಾಮಾನ್ಯ ದೃಶ್ಯವಾಗಿವೆ. ತಿಂಡಿ ಪೊಟ್ಟಣಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿರುವುದರಿಂದ ಪರಿಸರ ಅಸ್ವಚ್ಛವಾಗಿದ್ದು, ಜನರು ಅದೇ ಪರಿಸ್ಥಿತಿಯಲ್ಲಿ ನಿಂತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಸಾರ್ವಜನಿಕರಿಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಸಂಬಂಧಪಟ್ಟ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಸಮಗ್ರ ದುರಸ್ತಿ ಹಾಗೂ ಸ್ವಚ್ಛತಾ ಕ್ರಮ ಕೈಗೊಳ್ಳಬೇಕು. ಬಸ್ ನಿಲ್ದಾಣದ ಸ್ಥಿತಿ ಸುಧಾರಿಸಲು ನಗರಸಭೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸುಜಯ್ ಪೂಜಾರಿ ಒತ್ತಾಯಿಸಿದ್ದಾರೆ.







