ಕಾರ್ಕಳ, ಫೆ. 24: ತಾಲೂಕಿನ ಕಸಬಾ ಗ್ರಾಮದ ಕುಂಬ್ರಪದವು ಪ್ರದೇಶದಲ್ಲಿ ರಸ್ತೆ ಮಧ್ಯೆ ಕಾರು ನಿಲ್ಲಿಸಿದ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದಿದ್ದು, ವ್ಯಕ್ತಿಯೊಬ್ಬರ ಮೇಲೆ ಕಾರು ಹರಿಸಲು ಯತ್ನಿಸಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಪಣಪಿಲ ನಿವಾಸಿ ನಿತಿನ್ (35) ಶನಿವಾರ ಬೆಳಗ್ಗೆ ರಿಕ್ಷಾದಲ್ಲಿ ಸಂಚರಿಸುತ್ತಿದ್ದಾಗ, ಸೋಮನಾಥ ಎಂಬಾತ ತನ್ನ ಐ-10 ಕಾರನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ್ದಾಗಿ ತಿಳಿದುಬಂದಿದೆ. ದಾರಿ ಬಿಡುವಂತೆ ನಿತಿನ್ ಹಾರ್ನ್ ನೀಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಅವರು ವಾಹನದಿಂದ ಇಳಿದು ಕಾರನ್ನು ತೆಗೆಯುವಂತೆ ವಿನಂತಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಆಕ್ರೋಶಗೊಂಡ ಆರೋಪಿಯು ಏಕಾಏಕಿ ಕಾರನ್ನು ನಿತಿನ್ ಅವರತ್ತ ಚಲಾಯಿಸಿ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನಿತಿನ್ ತಕ್ಷಣ ತಪ್ಪಿಸಿಕೊಂಡು ರಿಕ್ಷಾ ಬಳಿಗೆ ತೆರಳಿದಾಗ, ಆರೋಪಿಯು ಅಲ್ಲಿಗೂ ಬಂದು ಕೈಯಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜಗಳ ಶಮನಕ್ಕೆ ಬಂದವರ ಮೇಲೂ ಅವಾಚ್ಯ ಶಬ್ದ ಬಳಸಿ ಜೀವ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಅಲ್ಲದೆ, ಸಂಜೆ ವೇಳೆಗೆ ನಿತಿನ್ ಅವರ ಪರಿಚಯಸ್ಥರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.







