ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ನೇತ್ರತಜ್ಞರು ನಾಲ್ಕು ವರ್ಷದ ಬಾಲಕಿಯ ಕಣ್ಣಿನಿಂದ ಜೀವಂತ ಹುಳುವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದರು.
ನಾಲ್ಕು ವರ್ಷದ ಬಾಲಕಿ ತನ್ನ ಬಲಗಣ್ಣಿನಲ್ಲಿ ನಿರಂತರ ಕೆಂಪಾಗುವಿಕೆಯೊಂದಿಗೆ ದಾಖಲಾದಳು; ಕಣ್ಣಿನ ಕಂಜಂಕ್ಟಿವಾ ಪೊರೆಯ ಕೆಳಗೆ ಜೀವಂತ ಪರಾವಲಂಬಿ ಹುಳುವನ್ನು ಪತ್ತೆ ಹಚ್ಚಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಯಿತು, ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದೆ.
ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ನೇತ್ರ ತಜ್ಞರು, ಬಲಗಣ್ಣಿನಲ್ಲಿ ನಿರಂತರ ಕೆಂಪಾಗುವಿಕೆ ಮತ್ತು ಕಿರಿಕಿರಿಯೊಂದಿಗೆ ದಾಖಲಾದ ನಾಲ್ಕು ವರ್ಷದ ಬಾಲಕಿಯ ಕಣ್ಣಿನಿಂದ ಜೀವಂತ ಪರಾವಲಂಬಿ ಹುಳುವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದೆ.
ಪೋಷಕರು ಮಗುವಿನ ಬಲಗಣ್ಣಿನಲ್ಲಿ ನಿರಂತರ ಕೆಂಪಾಗುವಿಕೆಯನ್ನು ಗಮನಿಸಿದ ನಂತರ ಮಗುವನ್ನು ನೇತ್ರಶಾಸ್ತ್ರ ವಿಭಾಗಕ್ಕೆ ಕರೆತರಲಾಯಿತು. ಪರೀಕ್ಷೆಯ ಸಂದರ್ಭದಲ್ಲಿ, ವೈದ್ಯರು ಕಂಜಂಕ್ಟಿವಾ ಪೊರೆಯ ಕೆಳಗೆ ಸಣ್ಣ ಮಿಡಿಯುತ್ತಿರುವ ಭಾಗವನ್ನು ಗಮನಿಸಿದರು, ಮತ್ತು ಸ್ಲಿಟ್-ಲ್ಯಾಂಪ್ ಬಯೋಮೈಕ್ರೋಸ್ಕೋಪಿ ಪರೀಕ್ಷೆಯು ಜೀವಂತ ಪರಾವಲಂಬಿಯ ಶಂಕೆಯನ್ನು ಹುಟ್ಟುಹಾಕಿತು. ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಯೋಗೀಶ್ ಎಸ್. ಕಾಮತ್ ಅವರ ನೇತೃತ್ವದಲ್ಲಿ, ಡಾ. ಪ್ರಿಯಲ್ ಅಗರ್ವಾಲ್, ಡಾ. ಅಪರ್ಣಾ (ಅರಿವಳಿಕೆ ವಿಭಾಗ) ಮತ್ತು ಶಸ್ತ್ರಚಿಕಿತ್ಸಾ ತಂಡವು ಸಾಮಾನ್ಯ ಅರಿವಳಿಕೆಯಡಿಯಲ್ಲಿ ಎಕ್ಸಿಶನ್ ಬಯಾಪ್ಸಿ ನಡೆಸಿತು.
ಹೊರತೆಗೆದ ಅಂಗಾಂಶದಿಂದ ತೆಳುವಾದ, ದಾರದಂತಹ ಹುಳು ಹೊರಬಂದು ಚಲಿಸಲು ಆರಂಭಿಸಿದಾಗ ಶಂಕೆ ದೃಢಪಟ್ಟಿತು. ಕೆಎಂಸಿ ಮಣಿಪಾಲದ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ವಿನಯ್ ಖನ್ನಾ ಅವರು ಇದನ್ನು ಡೈರೊಫಿಲೇರಿಯಾ ರೆಪೆನ್ಸ್ ಎಂದು ಗುರುತಿಸಿದರು. ಡೈರೊಫಿಲೇರಿಯಾಸಿಸ್ ಎಂಬುದು ಸೋಂಕಿತ ಸೊಳ್ಳೆಗಳ ಕಡಿತದ ಮೂಲಕ ಹರಡುವ ಝೂನೋಟಿಕ್ ಸೋಂಕಾಗಿದ್ದು, ಸಾಮಾನ್ಯವಾಗಿ ನಾಯಿ ಮತ್ತು ಇತರ ಪ್ರಾಣಿಗಳಿಗೆ ಸೋಂಕು ತಗುಲುತ್ತದೆ ಹಾಗೂ ಅಪರೂಪವಾಗಿ ಮನುಷ್ಯರಿಗೂ ಹರಡಬಹುದು, ಇಲ್ಲಿ ಅವು ಕಣ್ಣಿನ ಸುತ್ತಲೂ ನೆಲೆಗೊಳ್ಳಬಹುದು.
“ಮಾನವರಲ್ಲಿ ಡೈರೊಫಿಲೇರಿಯಾಸಿಸ್ ಅಪರೂಪವಾದರೂ, ಕರಾವಳಿ ಪ್ರದೇಶಗಳಲ್ಲಿನ ನೇತ್ರತಜ್ಞರು ಇಂತಹ ಪ್ರಕರಣಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ತ್ವರಿತ ರೋಗನಿರ್ಣಯ ಮತ್ತು ಸಕಾಲಿಕ ಶಸ್ತ್ರಚಿಕಿತ್ಸೆಯು ಸಂಪೂರ್ಣ ಗುಣಮುಖವನ್ನು ಖಚಿತಪಡಿಸುತ್ತದೆ. ನಮ್ಮ ಪುಟ್ಟ ರೋಗಿ ಚೆನ್ನಾಗಿ ಚೇತರಿಸಿಕೊಂಡಿರುವುದು ಸಂತಸದ ಸಂಗತಿ,” ಎಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಯೋಗೀಶ್ ಎಸ್. ಕಾಮತ್ ತಿಳಿಸಿದರು.
“ಈ ಪ್ರಕರಣವು ನಮ್ಮ ಆಸ್ಪತ್ರೆಯ ಸಂಘಟಿತ, ಬಹು ಆಯಾಮ ಚಿಕಿತ್ಸಾ ಆರೈಕೆಯ ಬಲವನ್ನು ಪ್ರತಿಬಿಂಬಿಸುತ್ತದೆ. ಇದು ಇಂತಹ ಸೋಂಕುಗಳನ್ನು ತಡೆಗಟ್ಟುವಲ್ಲಿ ಸೊಳ್ಳೆ ನಿಯಂತ್ರಣ ಮತ್ತು ಸಾಕುಪ್ರಾಣಿಗಳಿಗೆ ನಿಯಮಿತ ಪಶುವೈದ್ಯಕೀಯ ಆರೈಕೆಯ ಮಹತ್ವದ ಬಗ್ಗೆ ಸಮುದಾಯಕ್ಕೆ ನೀಡುವ ನೆನಪೂ ಆಗಿದೆ,” ಎಂದು ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಹೇಳಿದರು.







