ಸಿಪಿಐ(ಎಂ) ) ಇಸ್ರೋ ಖಾಸಗೀಕರಣವನ್ನು ಖಂಡಿಸಿದೆ ಮತ್ತು ಅದನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿದೆ.
ರಕ್ಷಣೆ, ಕೃಷಿ, ವಿಪತ್ತು ನಿರ್ವಹಣೆ, ಹವಾಮಾನ ಮುನ್ಸೂಚನೆ ಮತ್ತು ದೂರಸಂವೇದನೆಯ ಕ್ಷೇತ್ರಗಳಿಗೆ ಇಸ್ರೋ ನೀಡಿರುವ ಕೊಡುಗೆಗಳು ಭಾರತದ ಅರ್ಥವ್ಯವಸ್ಥೆಗೆ ಮತ್ತು ಭದ್ರತೆಗೆ ಆಯಕಟ್ಟಿನ ಮಹತ್ವ ಹೊಂದಿವೆ. ಇಂತಹ ನಿರ್ಣಾಯಕ, ಸ್ವಾವಲಂಬಿ ಸಂಸ್ಥೆಯನ್ನು ಖಾಸಗೀಕರಣಗೊಳಿಸುವುದರಿಂದ ಪ್ರಮುಖ ರಾಷ್ಟ್ರೀಯ ಮಹತ್ವದ ವಿಷಯಗಳಲ್ಲಿ ಖಾಸಗಿ ವಲಯದ ಮೇಲೆ ಅನಗತ್ಯ ಅವಲಂಬನೆ ಉಂಟಾಗುತ್ತದೆ ಎಂದು ಪೊಲಿಟ್ಬ್ಯುರೊ ಹೇಳಿದೆ.
ಇಸ್ರೋ ಇನ್ನು ಮುಂದೆ ಉಡಾವಣಾ ವಾಹನಗಳನ್ನು ತಯಾರಿಸುವುದಿಲ್ಲ ಎಂಬ IN-SPACe ಅಧ್ಯಕ್ಷ ಪವನ್ ಗೋಯೆಂಕಾ ಅವರ ಟಿಪ್ಪಣಿಗಳು ಸಮರ್ಪಿತ ಭಾರತೀಯ ವಿಜ್ಞಾನಿಗಳು ಏಳು ದಶಕಗಳಲ್ಲಿ ನಿರ್ಮಿಸಿದ ಬಾಹ್ಯಾಕಾಶ ಸಂಶೋಧನಾ ಮೂಲಸೌಕರ್ಯವನ್ನು ಖಾಸಗಿ ಮಂದಿಗೆ ಹಸ್ತಾಂತರಿಸುವ ದುಷ್ಟ ಯೋಜನೆಯನ್ನು ಪ್ರಕಟಗೊಳಿಸುತ್ತದೆ. ಈ ಪಲ್ಲಟ ಭಾರತೀಯ ಬಾಹ್ಯಾಕಾಶ ನೀತಿ 2023 ರ ಭಾಗವಾಗಿದೆ, ಈ ನೀತಿ ಇಡೀ ಬಾಹ್ಯಾಕಾಶ ವಲಯವನ್ನು ಖಾಸಗಿ ಉದ್ಯಮಕ್ಕೆ ತೆರೆದಿದೆ ಮತ್ತು ವಿದೇಶಿ ಹೂಡಿಕೆಗೆ ಉದಾರ ರಿಯಾಯಿತಿಗಳನ್ನು ನೀಡಿದೆ, ಇವೆಲ್ಲಕ್ಕೂಉಡಾವಣಾ ಕಾರ್ಯಾಚರಣೆಗಳಲ್ಲಿ ವೆಚ್ಚ-ದಕ್ಷತೆ ಎಂಬ ಮೋಸಗೊಳಿಸುವ ಹೆಸರು ಕೊಡಲಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಮಾರ್ಚ್ 2026 ರಲ್ಲಿ ಮಂಡಿಸಿದ ತನ್ನ ವರದಿಯಲ್ಲಿ, ಪಾರದರ್ಶಕತೆ ಅಥವ ಉತ್ತರದಾಯಿತ್ವ ಇಲ್ಲದೆ ಸಾರ್ವಜನಿಕ ಸ್ವತ್ತುಗಳನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.
ಇಸ್ರೋ ಸಿಬ್ಬಂದಿ ಸಂಘಗಳ ಜಂಟಿ ಕ್ರಿಯಾ ಸಮಿತಿಯು ಇಸ್ರೋ ಮುಖ್ಯಸ್ಥರಿಗೆ ಬರೆದ ಜಂಟಿ ಪತ್ರದ ಮೂಲಕ ಎತ್ತಿರುವ ಕಳವಳಗಳಿಗೆ ಪ್ರತಿಕ್ರಿಯೆಯಾಗಿ ಇಸ್ರೋ ನೀಡಿರುವ ಸ್ಪಷ್ಟೀಕರಣವು, ಈ ನೀತಿಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ, ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಬಹುದು ಎಂಬ ಮೂಲ ಆತಂಕವನ್ನು ಪರಿಹರಿಸಲು ಇದು ವಿಫಲವಾಗಿದೆ ಎಂದಿರುವ ಪೊಲಿಟ್ಬ್ಯುರೊ, ಸಿಪಿಐ(ಎಂ) ದೇಶದ ಆಯಕಟ್ಟಿನ ಹಿತಾಸಕ್ತಿಗಳ ರಕ್ಷಣೆಯ ಪರವಾಗಿ ಮತ್ತು ಇಸ್ರೋವನ್ನು ಬಲಪಡಿಸಲು ಒತ್ತಾಯಿಸುತ್ತಿರುವ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಸಿಬ್ಬಂದಿಯ ಪರವಾಗಿ ನಿಲ್ಲುತ್ತದೆ ಎನ್ನುತ್ತ ಇಂತಹ ಒಂದು ಬಹುಮಹತ್ವದ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಅದು ವಿರೋಧಿಸುವುದಾಗಿ ಹೇಳಿದೆ.
ಸುರೇಶ್ ಕಲ್ಲಾಗರ
ಕಾರ್ಯದರ್ಶಿ







