ಕುಂದಾಪುರ: ನಂದಿನಿ ಹಾಲಿನ ಅಂಗಡಿಯ ಮಾಡಿನ ತಗಡು ಒಡೆದು ಒಳನುಗ್ಗಿದ ಕಳ್ಳರು ಕ್ಯಾಶ್ ಡ್ರಾವರ್ನಲ್ಲಿದ್ದ ಸುಮಾರು ₹1.10 ಲಕ್ಷ ನಗದು ಹಣವನ್ನು ಕಳವು ಮಾಡಿರುವ ಘಟನೆ ಬಸ್ರೂರು ಮೂರ್ಕೈಯಲ್ಲಿ ನಡೆದಿದೆ.
ವಡೇರಹೋಬಳಿ ಗ್ರಾಮದ ಸುರೆಂದ್ರ (43) ಅವರು ಬಸ್ರೂರು ಮೂರ್ಕೈಯಲ್ಲಿ ನಂದಿನಿ ಹಾಲಿನ ಅಂಗಡಿ ನಡೆಸುತ್ತಿದ್ದರು. ಸೆ.6ರಂದು ರಾತ್ರಿ 10.30ರ ಸುಮಾರಿಗೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು.
ಸೆ.7ರಂದು ಬೆಳಗ್ಗೆ 6 ಗಂಟೆಗೆ ಅಂಗಡಿ ತೆರೆಯಲು ಬಂದಾಗ, ಅಂಗಡಿಯ ಮೇಲ್ಛಾವಣಿಯ ತಗಡು ಒಡೆದಿರುವುದು ಹಾಗೂ ಕ್ಯಾಶ್ ಡ್ರಾವರ್ನಲ್ಲಿದ್ದ ಹಣ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಸೆ.6ರ ರಾತ್ರಿ 10.30ರಿಂದ ಸೆ.7ರ ಬೆಳಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳರು ಅಂಗಡಿಯ ಮೇಲ್ಛಾವಣಿಯ ಸೀಟನ್ನು ಒಡೆದು ಒಳನುಗ್ಗಿ ಸುಮಾರು ₹1,10,000 ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







