ಕಾರ್ಕಳ: ಕುಟುಂಬ ಕಲಹದ ಹಿನ್ನೆಲೆ ಪತ್ನಿಯೇ ಪತಿಗೆ ಚೂರಿಯಿಂದ ಇರಿದ ಘಟನೆ ಕಾರ್ಕಳದಲ್ಲಿ ನಡೆದಿದ್ದು, ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಧನಪಾಲ (44) ಎಂಬವರು ನೀಡಿದ ದೂರಿನ ಪ್ರಕಾರ, ಅವರು ಮೇ 17ರಂದು ರಾತ್ರಿ 9 ಗಂಟೆ ಸುಮಾರಿಗೆ ಕಾರ್ಕಳ ಕಸಬಾ ಗ್ರಾಮದ ಜೋಡುರಸ್ತೆಯ ಮಟನ್ಸ್ಟಾಲ್ ಸಮೀಪದ ತಮ್ಮ ಮನೆಯಲ್ಲಿ ಇದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ಈ ವೇಳೆ ಪತ್ನಿ ನಾಗಮ್ಮ, “ನೀನು ಕೆಲಸ ಮಾಡುವುದಿಲ್ಲ, ನನ್ನ ಸಂಬಳದಲ್ಲಿ ನಿನ್ನನ್ನು ಸಾಕುತ್ತಿದ್ದೇನೆ. ನನಗೆ ವಿಚ್ಛೇದನ ನೀಡಿ, ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗು” ಎಂದು ಜಗಳ ಆರಂಭಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ದೂರಲಾಗಿದೆ.
ಬಳಿಕ ಆಕೆ ಹರಿತವಾದ ಚೂರಿಯಿಂದ ಧನಪಾಲ ಅವರ ಬಲ ಕುತ್ತಿಗೆ ಹಾಗೂ ಬಲ ಕೆನ್ನೆಗೆ ತಿವಿದ ಪರಿಣಾಮ ತೀವ್ರ ಗಾಯಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ಸಂದರ್ಭದಲ್ಲಿ ಗಣೇಶ ಎಂಬಾತ ಕೂಡ ಧನಪಾಲ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕೆನ್ನೆಗೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







