ಕಾಪು: ವೈಯಕ್ತಿಕ ವೈಷಮ್ಯದ ಹಿನ್ನೆಲೆ ವಾಚ್ಮನ್ ಸೇರಿದಂತೆ ಮೂವರ ಮೇಲೆ ಹಲ್ಲೆ ನಡೆಸಿದ ಘಟನೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರರಾದ ಶಂಕರ್ ಗಾಣಿಗ (58) ಅವರು ಉಡುಪಿ ಸೂಪರ್ ಬಜಾರ್ನಲ್ಲಿ ವಾಚ್ಮನ್ ಆಗಿ ಕೆಲಸ ಮಾಡುತ್ತಿದ್ದು, ಅದೇ ಕಟ್ಟಡದಲ್ಲಿರುವ ಆರ್.ಕೆ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಪರಿಚಯದ ಕೃಷ್ಣ ಗಾಣಿಗ ಎಂಬವರು ಕೆಲಸದ ವಿಚಾರವಾಗಿ ಆಗಾಗ ಗುರಾಯಿಸಿ ನಿಂದಿಸುತ್ತಿದ್ದರೆಂದು ದೂರಲಾಗಿದೆ.
ಸುಮಾರು 15 ದಿನಗಳ ಹಿಂದೆ ಕೃಷ್ಣ ಗಾಣಿಗ ಮದ್ಯಪಾನ ಮಾಡಿಕೊಂಡು ಬಂದು ಶಂಕರ್ ಗಾಣಿಗ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಇದೇ ವಿಚಾರವಾಗಿ ಮೇ 17ರಂದು ಸಂಜೆ 6.30ರ ಸುಮಾರಿಗೆ ಉಡುಪಿಯ ಬಲಾಯಿಪಾದೆ ಬಳಿ ನಡೆದುಕೊಂಡು ಹೋಗುತ್ತಿದ್ದ ಶಂಕರ್ ಗಾಣಿಗ ಅವರ ಮೇಲೆ ಕೃಷ್ಣ ಗಾಣಿಗ ಹಾಗೂ ಆತನ ಸ್ನೇಹಿತರಾದ ದಯಾನಂದ ಮತ್ತು ಅಣ್ಣೋಜಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವಿಚಾರವನ್ನು ಮಗ ಸೃಜನ್ಗೆ ತಿಳಿಸಿದ ಬಳಿಕ ರಾಜಿ ಮಾತುಕತೆಗಾಗಿ ಶಂಕರ್ ಗಾಣಿಗ, ಸೃಜನ್ ಹಾಗೂ ಸಂಬಂಧಿ ಸಂತೋಷ್ ಅವರು ಕೃಷ್ಣ ಗಾಣಿಗ ಮನೆಗೆ ತೆರಳಿದ್ದರು. ಈ ವೇಳೆ “ಯಾಕೆ ಹಲ್ಲೆ ಮಾಡಿದ್ದೀರಿ” ಎಂದು ಪ್ರಶ್ನಿಸಿದ ಸಂದರ್ಭ ಕೃಷ್ಣ ಗಾಣಿಗ ಹಾಗೂ ಆತನ ಪತ್ನಿ ಕೈಯಲ್ಲಿ ಕತ್ತಿ ಮತ್ತು ಕೋಲು ಹಿಡಿದು ಬಂದು ಶಂಕರ್ ಗಾಣಿಗ ಅವರ ತಲೆಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆ ತಡೆಯಲು ಮುಂದಾದ ಸೃಜನ್ ಹಾಗೂ ಸಂತೋಷ್ ಮೇಲೂ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಅಲ್ಲಿಗೆ ಬಂದ ದಯಾನಂದ ಮತ್ತು ಅಣ್ಣೋಜಿ ಕೂಡ ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.







