ಉಡುಪಿ; ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಯುವಕನನ್ನು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಶನಿವಾರ ನಡೆದಿದೆ.
ರೈಲ್ವೇ ರಕ್ಷಣಾ ಪಡೆಯ ಆರಕ್ಷಕ ವಿಶ್ರಾಮ್ ದೇಸಾಯಿಯವರು ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ, ಅಸಹಾಯಕ ಸ್ಥಿತಿಯನ್ನು ಎದುರಿಸುತ್ತಿದ್ದ ಯುವಕ ಕಂಡುಬಂದಿದ್ದಾನೆ. ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ. ನಂತರ ಹಸಿದ ಯುವಕನಿಗೆ ಆರ್ಪಿಎಫ್ ಕಚೇರಿಗೆ ಕರೆತಂದು ಉಪಹಾರಗಳನ್ನು ಒದಗಿಸಿ, ನಂತರ ಸಮಾಜಸೇವಕ ನಿತ್ಯಾನಂದ ಒಳಕಾಡುವರ ನೆರವಿನಿಂದ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸುವ ಪ್ರಕ್ರಿಯೆ ನಡೆಯಿತು. ಘಟನೆಯ ಬಗ್ಗೆ ಮಣಿಪಾಲ ಪೋಲಿಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಆರ್ ಪಿ ಎಫ್ ಜೀನಾ ಪಿಂಟೋ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.

ಯುವಕ ತೆಲುಗು ಮಾತನಾಡುತ್ತಿದ್ದು ಹೆಸರು ದಿಲೀಪ್, ಆಂಧ್ರಪ್ರದೇಶದ ನಿವಾಸಿ ಎಂದಷ್ಟೆ ಹೇಳಿಕೊಂಡಿದ್ದಾರೆ. ವಾರಸುದಾರರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.







