ಉಡುಪಿ: ಜಿಲ್ಲೆಯಲ್ಲಿ ಹೊರರಾಜ್ಯದ ವ್ಯಾಪಾರಿಗಳಿಂದ ಸ್ಥಳೀಯ ಟೈಲರ್ಗಳಿಗೆ (ಹೊಲಿಗೆ ವೃತ್ತಿ ಮಾಡುವವರಿಗೆ) ಆಗುತ್ತಿರುವ ಅನ್ಯಾಯವನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕ ಇಂದು ಬೃಹತ್ ಪ್ರತಿಭಟನಾತ್ಮಕ ಅಭಿಯಾನವನ್ನು ಹಮ್ಮಿಕೊಂಡಿತ್ತು.
ಉಡುಪಿ ಜಿಲ್ಲೆಯಲ್ಲಿ ಹೊರರಾಜ್ಯಗಳಿಂದ ಬಂದ ವ್ಯಾಪಾರಿಗಳು ಬಟ್ಟೆ ಹಾಗೂ ಇತರ ಸಾಮಗ್ರಿಗಳನ್ನು ಮಾರಾಟ ಮಾಡುವುದರ ಜೊತೆಗೆ, ಸ್ಥಳದಲ್ಲೇ ಟೈಲರಿಂಗ್ ಕೆಲಸವನ್ನೂ ವಹಿಸಿಕೊಂಡು ಮಾಡುತ್ತಿದ್ದಾರೆ. ಇದರಿಂದಾಗಿ ದಶಕಗಳಿಂದ ಈ ವೃತ್ತಿಯನ್ನೇ ನಂಬಿಕೊಂಡಿರುವ ಸ್ಥಳೀಯ ಟೈಲರ್ಗಳ ಬದುಕಿಗೆ ಪೆಟ್ಟು ಬಿದ್ದಿದೆ. ಈ ಕುರಿತು ನೊಂದ ಟೈಲರ್ಗಳು ಉಡುಪಿ ಜಿಲ್ಲಾ ಘಟಕಕ್ಕೆ ಮನವಿ ಸಲ್ಲಿಸಿ ನ್ಯಾಯ ಕೊಡಿಸುವಂತೆ ವಿನಂತಿಸಿದ್ದರು.
ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಅ. ರಾ. ಪ್ರಭಾಕರ್ ಪೂಜಾರಿ ಅವರ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳು ಇಂದು ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಅ. ರಾ ಪ್ರಭಾಕರ ಪೂಜಾರಿ ಸ್ಥಳೀಯರ ಹೊಟ್ಟೆ ಮೇಲೆ ಹೊಡೆಯುವ ಇಂತಹ ಅನಧಿಕೃತ ಹೊಲಿಗೆ ಕೆಲಸಗಳನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಶಾಬುದ್ದೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಬಸ್ರೂರು, ಸಾಮಾಜಿಕ ಜಾಲತಾಣ ಸಂಚಾಲಕರಾದ ಪುರುಷೋತ್ತಮ್ ಪೂಜಾರಿ ಕೊಡಪಾಡಿ, ಕಾರ್ಯದರ್ಶಿ ಮಜೀದ್, ಉಡುಪಿ ನಗರ ಅಧ್ಯಕ್ಷ ಅಜಾರುದ್ದೀನ್ ದಾಮೋದರ ಮೊಗವೀರ ಬೈಂದೂರು, ಮಹಿಳಾ ಘಟಕದ ಪ್ರಮುಖರಾದ ಅಶ್ವಿನಿ ನಾಯ್ಕ್, ಅನುಷಾ ಆಚಾರ್, ಸುನಂದಾ, ಶಶಿಕಲಾ, ಕುಂದಾಪುರ ತಾಲೂಕು ಅಧ್ಯಕ್ಷ ಸಂತೋಷ್ ಶೆಟ್ಟಿ ಪಡುಮುಂಡು, ಉಪಾಧ್ಯಕ್ಷರಾದ ಕೆ. ಸಿ ಸಂತೋಷ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಮೊಗವೀರ, ಜೊತೆ ಕಾರ್ಯದರ್ಶಿ ಶ್ರೀಧರ್ ಕೋಟೆ, ಖಜಾಂಚಿ ಶಿವಾನಂದ ಶೇರಿಗಾರ್, ಮಹೇಶ್ ಬಿ. ಎಚ್, ಕಿರಣ್ ಕೋಟೇಶ್ವರ, ಬೈಂದೂರು ಅಧ್ಯಕ್ಷರಾದ ರಾಜೇಶ್ ಪೂಜಾರಿ ತ್ರಾಸಿ, ಗೋಪಾಲ್ ಕಾವ್ರಾಡಿ, ಸುರೇಶ ಅಮಾಸೆಬೈಲು, ಕಾರ್ಕಳ ತಾಲೂಕು ಉಪಾಧ್ಯಕ್ಷ ಮೊಬಿನ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.
ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನೂರಾರು ಸಂಖ್ಯೆಯ ಟೈಲರ್ಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕರವೇ ಹಮ್ಮಿಕೊಂಡ ಈ ಕಾರ್ಯಕ್ಕೆ ಸ್ಥಳೀಯ ವೃತ್ತಿಪರ ಟೈಲರ್ ಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

”ಕನ್ನಡ ನೆಲದಲ್ಲಿ ಸ್ಥಳೀಯರ ವೃತ್ತಿ ಹಿತರಕ್ಷಣೆ ನಮ್ಮ ಆದ್ಯತೆ. ಹೊರರಾಜ್ಯದವರು ವ್ಯಾಪಾರ ಮಾಡಲಿ, ಆದರೆ ಸ್ಥಳೀಯ ಟೈಲರ್ಗಳ ಜೀವನೋಪಾಯಕ್ಕೆ ಅಡ್ಡಿಪಡಿಸುವುದನ್ನು ನಾವು ಸಹಿಸುವುದಿಲ್ಲ.” ಎನ್ನುವುದೇ ಕರ್ನಾಟಕ ರಕ್ಷಣಾ ವೇದಿಕೆಯ ಆಶಯವಾಗಿದೆ.







