ಮಣಿಪಾಲ, ಮಾ.31: ಅಮೆರಿಕನ್ ಹಾರ್ಟ್ ಅಸೋಸಿಯೇಷನ್ (AHA) ಭಾರತದಲ್ಲಿ ಕಾರ್ಡಿಯೋಪಲ್ಮನರಿ ರಿಸಸಿಟೇಶನ್ (CPR) ಮತ್ತು ತುರ್ತು ಕಾರ್ಡಿಯೋವಾಸ್ಕುಲರ್ ಕೇರ್ (ECC) ಗಾಗಿ ತನ್ನ 2025ರ ಮಾರ್ಗಸೂಚಿಗಳನ್ನು ಮಣಿಪಾಲ ಅಕಾಡೆಮಿ ಒಫ್ ಹೈಯರ್ ಎಜುಕೇಶನ್ ಘಟಕವಾದ ಕಸ್ತೂರ್ಭ ಮೆಡಿಕಲ್ ಕಾಲೇಜ್ ನಲ್ಲಿ ಬಿಡುಗಡೆ ಮಾಡಿತು.
“ಪುನರುಜ್ಜೀವನ ವಿಜ್ಞಾನ ಮತ್ತು ತುರ್ತು ಕಾರ್ಡಿಯೋವಾಸ್ಕುಲರ್ ಕೇರ್ನಲ್ಲಿ ಅಡ್ವಾನ್ಸಿಂಗ್ ಎಕ್ಸಲೆನ್ಸ್” ಎಂಬ ವಿಷಯದಡಿ ನಡೆದ ಈ ಕಾರ್ಯಕ್ರಮದಲ್ಲಿ ಆರೋಗ್ಯ ತಜ್ಞರು, ಶಿಕ್ಷಣ ವಿದ್ವಾಂಸರು ಮತ್ತು ತುರ್ತು ಆರೈಕೆ ವೃತ್ತಿಪರರು ಭಾಗವಹಿಸಿದರು.

ಕಾರ್ಯಕ್ರಮವನ್ನು ಕೆಎಂಸಿ ಡೀನ್ ಡಾ. ಅನಿಲ್ ಕೆ. ಭಟ್ ಉದ್ಘಾಟಿಸಿ, ಕಾರ್ಯಕ್ರಮದ ಅವಲೋಕನ ನೀಡಿದರು. AHA ಏಷ್ಯಾ ಪೆಸಿಫಿಕ್ ಉಪಾಧ್ಯಕ್ಷ ಜಾನ್ ಕಿಮ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹೃದಯ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ಜಾಗತಿಕ ಸಹಕಾರದ ಅಗತ್ಯತೆಯನ್ನು ಒತ್ತಿ ಹೇಳಿದರು.
AHA ಇಂಡಿಯಾ ಕನ್ಸಲ್ಟೆಂಟ್ ಪ್ರಾದೇಶಿಕ ನಿರ್ದೇಶಕ ಡಾ. ಸಚಿನ್ ವಿ. ಮೆನೋನ್ ಅವರು ಭಾರತೀಯ ಸಂಸ್ಥೆಗಳ ಬೆಂಬಲವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಹೆ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕುಮಾರ್ ರಾವ್ ಕೆ, ಸಿಪಿಆರ್ ತರಬೇತಿಯನ್ನು ಆಸ್ಪತ್ರೆಗಳನ್ನು ಮೀರಿ ಸಮುದಾಯ ಮಟ್ಟಕ್ಕೆ ವಿಸ್ತರಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು. “ಸಿಪಿಆರ್ ವೈದ್ಯರಿಗೆ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನಿಗೂ ಅಗತ್ಯವಾದ ಕೌಶಲ್ಯ” ಎಂದು ಅವರು ಹೇಳಿದರು.
ಹೃದಯಾಘಾತದ ತುರ್ತು ಪರಿಸ್ಥಿತಿಯ ಮೊದಲ ಕೆಲವು ನಿಮಿಷಗಳಲ್ಲಿ ನೀಡುವ ತಕ್ಷಣದ ಪ್ರತಿಕ್ರಿಯೆ ಬದುಕುಳಿಯುವಿಕೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ಶಾಲೆಗಳು, ಕೆಲಸದ ಸ್ಥಳಗಳು ಮತ್ತು ಸಾರ್ವಜನಿಕ ವಲಯಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ವಿಸ್ತರಿಸಲು ಒತ್ತು ನೀಡಲಾಗಿದೆ.
ಈ ಮಾರ್ಗಸೂಚಿಗಳು ಆಸ್ಪತ್ರೆಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ಸಿಪಿಆರ್ ವಿಧಾನಗಳನ್ನು ಪ್ರಮಾಣೀಕರಿಸಲು, ತುರ್ತು ಹೃದಯ ಆರೈಕೆಯ ಗುಣಮಟ್ಟವನ್ನು ಸುಧಾರಿಸಲು ಮತ್ತು ಆರೋಗ್ಯ ಸೇವಾ ಪೂರೈಕೆದಾರರ ಸನ್ನದ್ಧತೆಯನ್ನು ಹೆಚ್ಚಿಸಲು ನೆರವಾಗಲಿವೆ ಎಂದು ನಿರೀಕ್ಷಿಸಲಾಗಿದೆ.
ಕೆಎಂಸಿ ತರಬೇತಿ ಕೇಂದ್ರದ ಸಂಯೋಜಕ ಡಾ. ವಿಮಲ್ ಕೃಷ್ಣನ್ ಎಸ್ ಧನ್ಯವಾದ ಅರ್ಪಿಸಿದರು. ಡಾ. ಸುಷ್ಮಾ ಪ್ರಭಾತ್ ಹಾಗೂ ಡಾ. ನಿಶಾ ಸಾರಾ ಮುಂಡಪ್ಪಲ್ಲಿಲ್ ಜಾಕೋಬ್ ಕಾರ್ಯಕ್ರಮವನ್ನು ನಿರೂಪಿಸಿದರು.







