ಕುಂದಾಪುರ, ಮಾ. 26: ಭೀಕರ ರಸ್ತೆ ಅಪಘಾತ ಒಂದು ಸಂಭವಿಸಿ, ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ.
ಮಾರ್ಚ್ 24ರಂದು ಸಂಜೆ, ಶ್ರೀನಿವಾಸ ಗಾಣಿಗ ಅವರು ತಮ್ಮ ಬೈಕ್ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ-ಬೈಂದೂರು ಏಕಮುಖ ಮಾರ್ಗದಲ್ಲಿ ಹೆಮ್ಮಾಡಿ ಕಡೆಗೆ ಸಾಗುತ್ತಿದ್ದರು. ಸಂಜೆ ಸುಮಾರು 7:45ರ ವೇಳೆಗೆ ತಲ್ಲೂರು ಗ್ರಾಮದ ವೇಬ್ರಿಡ್ಜ್ ಸಮೀಪ, ವಿರುದ್ಧ ದಿಕ್ಕಿನಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಇಬ್ಬರು ಸವಾರರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಶ್ರೀನಿವಾಸ ಗಾಣಿಗ ಅವರಿಗೆ ತಲೆಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ರಮೇಶ್ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುವನ್ನು ತಕ್ಷಣ ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10:11ರ ಸುಮಾರಿಗೆ ಶ್ರೀನಿವಾಸ ಗಾಣಿಗ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







