ಕೋಟ, ಮಾ. 26: ಪಾಮೋಲಿನ್ ಎಣ್ಣೆ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಕುಂದಾಪುರ ತಾಲೂಕಿನ ಹಳ್ಳಾಡಿ ಹರ್ಕಾಡಿ ಗ್ರಾಮದ ಗಾವಳಿ ಕ್ರಾಸ್ ಬಳಿ ನಡೆದಿದೆ.
ಮಂಗಳೂರಿನಿಂದ ದಾವಣೆಗೆರೆಗೆ ಹೊರಟಿದ್ದ ಲಾರಿಯನ್ನು ಚಾಲಕ ಶಾಜನ್ ಜೊಸೇಫ್ ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ವೇಳೆ, ಎದುರುಗಡೆಯಿಂದ ಬಂದ ಬೈಕ್ ಸವಾರನನ್ನು ತಪ್ಪಿಸಲು ಏಕಾಏಕಿ ಬ್ರೇಕ್ ಹಾಕಿದ್ದಾನೆ. ಇದರಿಂದ ಲಾರಿ ಎಡಭಾಗಕ್ಕೆ ಉರುಳಿ ಬಿದ್ದಿದೆ.
ಘಟನೆಯಲ್ಲಿ ಚಾಲಕನಿಗೆ ತಲೆಗೆ ಗಾಯ ಹಾಗೂ ಬಲಗೈ ಮೂಳೆ ಮುರಿತವಾಗಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಕಣ್ಣೂರಿಗೆ ಕರೆದೊಯ್ಯಲಾಗಿದೆ.
ಅಪಘಾತದಲ್ಲಿ ಲಾರಿ ಭಾರೀ ಹಾನಿಗೊಳಗಾಗಿದ್ದು, ಲಾರಿಯಲ್ಲಿ ಸಾಗಿಸುತ್ತಿದ್ದ ಪಾಮೋಲಿನ್ ಎಣ್ಣೆ ಕೂಡಾ ಬಹಳಷ್ಟು ನಷ್ಟವಾಗಿದೆ.
ಈ ಸಂಬಂಧ ಚಂದ್ರ ಎಂ ನೀಡಿದ ದೂರಿನ ಆಧಾರದಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







