ಕಾರ್ಕಳ: ಅತ್ತೂರು ಬೇರಂದೊಟ್ಟುದಲ್ಲಿರುವ ಶ್ರೀ ಧರ್ಮರಸು, ಶ್ರೀ ಕೊಡಮಣಿತ್ತಾಯಿ ಕುಕ್ಕಿನಂತಾಯ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವಾರ್ಷಿಕ ನೇಮೋತ್ಸವವು ಭಕ್ತಿಭಾವ ಮತ್ತು ಸಂಭ್ರಮದೊಂದಿಗೆ ನಡೆಯಿತು. ಮಾರ್ಚ್ 17ರಿಂದ ಆರಂಭಗೊಂಡ ನೇಮೋತ್ಸವವು ಮಾರ್ಚ್ 22ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ಈ ಸಂದರ್ಭದಲ್ಲಿ ದೈವಗಳ ಸಿರಿ ಸಿಂಗಾರದ ನೇಮೋತ್ಸವ, ಅನ್ನ ಸಂತರ್ಪಣೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತರ ಮನಸೆಳೆಯುವಂತಾಗಿದ್ದವು. ವಿವಿಧ ಭಜನಾ ಮಂಡಳಿಗಳಿಂದ ಕುಣಿತ ಭಜನೆ, ಚಂಡೆ ಬಳಗದವರಿಂದ ಚೆಂಡೆ ವಾದನ, ಕೊಂಬು-ಕಹಳೆ ವಾದ್ಯ ಹಾಗೂ ಬ್ಯಾಂಡ್ ಸೆಟ್ ಡೋಲುಗಳ ನಾದ ದೈವಸ್ಥಾನದ ವಾತಾವರಣವನ್ನು ಭಕ್ತಿಮಯವಾಗಿಸಿತು.


ನೇಮೋತ್ಸವದ ಅಂಗವಾಗಿ ನಡೆದ ಅನ್ನ ಸಂತರ್ಪಣೆ ಕುರಿತು ಪಾಕಶಾಲೆಯ ಗುರುರಾಜ್ ಭಟ್ ಅತ್ತೂರು ಮಾಹಿತಿ ನೀಡಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿದರು ಎಂದು ತಿಳಿಸಿದರು.
ಗರಡಿ ಫ್ರೆಂಡ್ಸ್ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ, ಗುತ್ತು ಬರ್ಕೆ ಮತ್ತು ಊರ-ಪರ ಊರ ದಾನಿಗಳ ನೆರವಿನಿಂದ ನೇಮೋತ್ಸವವು ವಿಜೃಂಭಣೆಯಿಂದ ನಡೆಯಿತು.

ಧಾರ್ಮಿಕ ಪೂಜಾ ವಿಧಿಗಳು ವಾಸುದೇವ ಭಟ್ ಮತ್ತು ಮಾಧವ ಭಟ್ ಅವರ ಪೌರೋಹಿತ್ಯದಲ್ಲಿ ನೆರವೇರಿದವು.







