ಉಡುಪಿ, ಮಾ. 07: ಪ್ರಾಕೃತಿಕ ವೈಪರೀತ್ಯಗಳು ಅಥವಾ ಅಪಘಾತಗಳಿಂದಾಗಿ ವ್ಯಕ್ತಿ ಜೀವ-ಮರಣದ ಅಸಹಾಯಕ ಸ್ಥಿತಿಗೆ ತಲುಪಿದಾಗ, ಯಾವುದೇ ಚಿಕಿತ್ಸೆಯಿಂದ ಹಿಂದಿನ ಆರೋಗ್ಯ ಸ್ಥಿತಿಗೆ ಮರಳುವ ಸಾಧ್ಯತೆ ಇಲ್ಲವೆಂದು ತಿಳಿದ ಸಂದರ್ಭದಲ್ಲಿ ಘನತೆಯಿಂದ ಮರಣವನ್ನು ಆಯ್ಕೆಮಾಡಲು ವ್ಯಕ್ತಿ ಮುಂಚಿತವಾಗಿ ನೀಡುವ ವೈದ್ಯಕೀಯ ಸೂಚನೆಯನ್ನು ‘ಲಿವಿಂಗ್ ವಿಲ್’ ಅಥವಾ ‘ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್’ ಎಂದು ಕರೆಯಲಾಗುತ್ತದೆ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶಾನುಭಾಗ್ ತಿಳಿಸಿದರು.
ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನದಿಂದ ಸಾಮಾಜಿಕ ಜಾಗೃತಿಗಾಗಿ ಕುಂಜಿಬೆಟ್ಟು ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಹಿರಿಯ ನಾಗರಿಕರ ರಕ್ಷಣೆಗೆ ಸಂಬಂಧಿಸಿದ ಕಾನೂನು ಅರಿವು ಕಾರ್ಯಕ್ರಮದಲ್ಲಿ ‘ಘನತೆಯಿಂದ ಸಾಯುವ ಹಕ್ಕು – ಒಂದು ಮೂಲಭೂತ ಹಕ್ಕು’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಲಿವಿಂಗ್ ವಿಲ್ಗೆ ಪ್ರತ್ಯೇಕ ಕಾನೂನು ಮಾನ್ಯತೆ ಇಲ್ಲದಿದ್ದರೂ, ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಆಧಾರದ ಮೇಲೆ ಇದನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ವಾರ್ಧಕ್ಯದಲ್ಲಿ ಆರೋಗ್ಯಕರ ಹಾಗೂ ಆರಾಮದಾಯಕ ಜೀವನ ನಡೆಸುವ ವಿಧಾನ, ಔಷಧಗಳ ಸರಿಯಾದ ಬಳಕೆ, ಕಾನೂನು ಅರಿವು ಮತ್ತು ಹಿರಿಯರು ಎದುರಿಸುವ ಸಮಸ್ಯೆಗಳ ಕುರಿತು ಮಾಹಿತಿ ನೀಡಲಾಯಿತು. ಜೀವನದ ಅಂತಿಮ ಹಂತದಲ್ಲಿ ಇರುವವರಿಗೆ ನಾವು ಏನು ನೆರವು ನೀಡಬಹುದು, ಘನತೆಯಿಂದ ಸಾಯುವ ಹಕ್ಕಿನ ಅರ್ಥವೇನು, ಬದುಕಿನ ಕೊನೆಯಲ್ಲಿ ಗೌರವಯುತ ಹಾಗೂ ನೋವಿಲ್ಲದ ಮರಣವನ್ನು ಪಡೆಯುವ ಮಾರ್ಗಗಳು ಯಾವುವು ಎಂಬ ವಿಷಯಗಳನ್ನೂ ಡಾ| ಶಾನುಭಾಗ್ ವಿವರಿಸಿದರು.
ಸ್ವಯಂ ಚಿಕಿತ್ಸೆ ಅಪರಾಧ
ವೈದ್ಯರ ಸಲಹೆ ಇಲ್ಲದೆ ಸ್ವಯಂ ಔಷಧ ಸೇವಿಸುವುದು ಅಪಾಯಕಾರಿಯಷ್ಟೇ ಅಲ್ಲ, ಅದು ಕಾನೂನುಬದ್ಧವಾಗಿಯೂ ತಪ್ಪಾಗಿದೆ. ಈ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕಿದೆ. ಇತರರ ನಿರ್ಲಕ್ಷ್ಯ ಅಥವಾ ತಪ್ಪುಗಳಿಂದ ಆರೋಗ್ಯ ಸಮಸ್ಯೆಗಳು ಉಂಟಾದರೆ ಅದು ಮಾನವ ನಿರ್ಮಿತ ಅಪರಾಧವಾಗುತ್ತದೆ. ಎಂಡೋಸಲ್ಫಾನ್ ದುರಂತದ ಪ್ರಕರಣದಲ್ಲಿ ಸಂತ್ರಸ್ತರ ಪರವಾಗಿ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಅವರಿಗೆ ಈಗ ಸಹಾಯಧನ ದೊರೆಯುತ್ತಿದೆ ಎಂದು ಹೇಳಿದರು.
ಶಸ್ತ್ರಚಿಕಿತ್ಸೆಯಲ್ಲಿ ರೋಗಿಗಳ ಹಕ್ಕುಗಳು
ತಮಗೆ ಬಂದಿರುವ ರೋಗದ ಕುರಿತು ಸ್ಪಷ್ಟ ಮಾಹಿತಿ ಪಡೆಯುವುದು, ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ತಿಳಿದುಕೊಳ್ಳುವುದು, ಚಿಕಿತ್ಸೆ ಆಯ್ಕೆಮಾಡುವ ಹಕ್ಕು, ಚಿಕಿತ್ಸೆ ದೇಹದ ಮೇಲೆ ಬೀರುವ ಪರಿಣಾಮಗಳನ್ನು ಅರಿಯುವುದು ಹಾಗೂ ಬೇಕಾದರೆ ಚಿಕಿತ್ಸೆ ನಿರಾಕರಿಸುವ ಹಕ್ಕು ರೋಗಿಗಳಿಗೆ ಇದೆ. ಈ ವಿಷಯಗಳನ್ನು ವೈದ್ಯರು ತಿಳಿಸದಿದ್ದರೆ ರೋಗಿಗಳು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಅವರು ತಿಳಿಸಿದರು.







