ಮಂಗಳೂರು, ಮಾ. 07: ಮಂಗಳೂರು ಪ್ರದೇಶದ ರೈಲು ಪ್ರಯಾಣಿಕರ ಬಹುಕಾಲದ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದೆ. ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮಂಗಳೂರು ಮತ್ತು ತಮಿಳುನಾಡಿನ ತಿರುನಲ್ವೇಲಿ ನಡುವೆ ಹೊಸ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಿಸಲು ಕೇಂದ್ರ ರೈಲ್ವೆ ಸಚಿವಾಲಯ ಅನುಮತಿ ನೀಡಿದೆ.
ಕೇಂದ್ರ ಸಚಿವ ಡಾ. ಎಲ್. ಮುರುಗನ್ ಅವರ ವಿಶೇಷ ಮನವಿಯನ್ನು ಪರಿಗಣಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ರೈಲು ಸೇರಿ ಒಟ್ಟು ನಾಲ್ಕು ಹೊಸ ರೈಲುಗಳಿಗೆ ಅನುಮೋದನೆ ನೀಡಿದ್ದಾರೆ. ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ಈ ಸೇವೆಗಳು ಮಾರ್ಚ್ ತಿಂಗಳ ಮೂರನೇ ವಾರದಿಂದ ಹಂತ ಹಂತವಾಗಿ ಆರಂಭವಾಗುವ ಸಾಧ್ಯತೆ ಇದೆ.
ಮಂಗಳೂರಿಗೆ ಹೊಸ ರೈಲುಗಳ ಸೇರ್ಪಡೆ, ಆದರೆ ಲಾಭ ಕೇರಳ–ತಮಿಳುನಾಡಿಗೆ ಹೆಚ್ಚು
ಕಳೆದ ಮೂರು ತಿಂಗಳ ಅವಧಿಯಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹಲವು ಹೊಸ ರೈಲು ಸೇವೆಗಳು ಮಂಜೂರಾಗಿವೆ. ಈಗಾಗಲೇ ನಾಗರಕೋಯಿಲ್–ತಾಂಬರಂ ನಡುವೆ ‘ಅಮೃತ್ ಭಾರತ್’ ರೈಲುಗಳು ಹಾಗೂ ರಾಮೇಶ್ವರಂಗೆ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾಗಿದ್ದು, ಇದೀಗ ತಿರುನಲ್ವೇಲಿ ಎಕ್ಸ್ಪ್ರೆಸ್ ಕೂಡ ಸೇರ್ಪಡೆಯಾಗಲಿದೆ.
ಇದಲ್ಲದೆ, ಈಗಿರುವ ಕೆಲವು ರೈಲುಗಳಿಗೆ ಹೆಚ್ಚುವರಿ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸುವುದಕ್ಕೂ ರೈಲ್ವೆ ಇಲಾಖೆ ಮುಂದಾಗಿದೆ. ಮಂಗಳೂರು–ರಾಮೇಶ್ವರಂ ಎಕ್ಸ್ಪ್ರೆಸ್ (16621/16622) ರೈಲು ಇನ್ನುಮುಂದೆ ತಿರೂರ್, ಉಡುಮಲೈಪೆಟ್ಟೈ ಮತ್ತು ಪರಮಕುಡಿ ನಿಲ್ದಾಣಗಳಲ್ಲಿಯೂ ನಿಲುಗಡೆ ಪಡೆಯಲಿದೆ. ಅದೇ ವೇಳೆ ತಾಂಬರಂ–ರಾಮೇಶ್ವರಂ ಎಕ್ಸ್ಪ್ರೆಸ್ಗೆ ಪನ್ರುತಿ ನಿಲ್ದಾಣದಲ್ಲಿ ಹೊಸ ನಿಲುಗಡೆ ಅವಕಾಶ ನೀಡಲಾಗಿದೆ.
ಪ್ರಯಾಣಿಕರ ಹೆಚ್ಚುತ್ತಿರುವ ದಟ್ಟಣೆಯನ್ನು ಕಡಿಮೆ ಮಾಡುವುದರ ಜೊತೆಗೆ ಪ್ರಯಾಣವನ್ನು ಹೆಚ್ಚು ಸುಗಮ ಹಾಗೂ ಆರಾಮದಾಯಕವಾಗಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.







