ಮಂಗಳೂರು, ಮಾ. 07: ಇಸ್ರೇಲ್–ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಮತ್ತು ಮಧ್ಯಪ್ರಾಚ್ಯದ ವಾಯುಪ್ರದೇಶದ ಮೇಲಿನ ನಿರ್ಬಂಧಗಳ ಪರಿಣಾಮವಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಕಾರ್ಯನಿರ್ವಹಿಸಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಎಲ್ಲಾ ನಿಗದಿತ ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಇರಾನ್–ಇಸ್ರೇಲ್ ನಡುವಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ಪ್ರಮುಖ ವಾಯು ಮಾರ್ಗಗಳಲ್ಲಿ ಭದ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿದ್ದು, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ದುಬೈ, ಅಬುಧಾಬಿ ಸೇರಿದಂತೆ ಗಲ್ಫ್ ಪ್ರದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆಗೆ ನಿರ್ಬಂಧ ವಿಧಿಸಲಾಗಿರುವುದಾಗಿ ವರದಿಯಾಗಿದ್ದು, ಇದರ ಪರಿಣಾಮವಾಗಿ ಅನೇಕ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲು ಅಥವಾ ಮಾರ್ಗ ಬದಲಾವಣೆ ಮಾಡಲು ಮುಂದಾಗಿವೆ.
ಈ ಬೆಳವಣಿಗೆ ಭಾರತೀಯ ವಿಮಾನಯಾನ ಕ್ಷೇತ್ರಕ್ಕೂ ಪರಿಣಾಮ ಬೀರಿದೆ. ವಾಯುಪ್ರದೇಶ ಮುಚ್ಚುವಿಕೆ ಮುಂದುವರಿದಿರುವ ಹಿನ್ನೆಲೆ ಸಾವಿರಾರು ವಿಮಾನ ಸಂಚಾರಗಳು ರದ್ದಾಗಿವೆ. ಇಂಡಿಗೋ ಸಂಸ್ಥೆಯೂ ಮಾರ್ಚ್ 7 ರಂದು 140 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಪಡಿಸಿದೆ ಎಂದು ತಿಳಿದುಬಂದಿದೆ.
ಇದರ ಮಧ್ಯೆ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರು ತಮ್ಮ ಪ್ರಯಾಣ ವೇಳಾಪಟ್ಟಿಯ ನವೀಕರಣ, ಮರುಬುಕಿಂಗ್ ಅಥವಾ ಮರುಪಾವತಿ ಸಂಬಂಧಿತ ಮಾಹಿತಿಗಾಗಿ ಸಂಬಂಧಿತ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಲು ಸೂಚಿಸಲಾಗಿದೆ.







