ಕಾಸರಗೋಡು, ಮಾ. 07: ದೈಹಿಕ ಅಡಚಣೆಗಳು ಗುರಿ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ನೀಲೇಶ್ವರದ ಕಾಜಲ್ ರಾಜು ಜೀವಂತ ಉದಾಹರಣೆಯಾಗಿದ್ದಾರೆ. ಫೋಕೊಮೆಲಿಯಾ ಸಿಂಡ್ರೋಮ್ನಿಂದ ಬಲ ಮುಂಗೈ ಇಲ್ಲದಿದ್ದರೂ, ತಮ್ಮ ದೃಢಸಂಕಲ್ಪ ಮತ್ತು ಅಚಲ ಆತ್ಮವಿಶ್ವಾಸದೊಂದಿಗೆ ಕಾಜಲ್ ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 167ನೇ ರ್ಯಾಂಕ್ ಗಳಿಸಿ ಭಾರತೀಯ ಆಡಳಿತ ಸೇವೆ (IAS) ಸೇರುವ ದಾರಿಯನ್ನು ತೆರೆದಿದ್ದಾರೆ.
ನೀಲೇಶ್ವರ ಸಮೀಪದ ಪಲ್ಲಿಕ್ಕರದ ನಿವಾಸಿಯಾಗಿರುವ ಕಾಜಲ್ ಅವರ ತಾಯಿ ಶೀಬಾ ಎಂ ಡಿವೈನ್ ಪ್ರಾವಿಡೆನ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ತಂದೆ ರಾಜು ಪಿ ವಿದೇಶದಲ್ಲಿ ಉದ್ಯೋಗ ನಿರ್ವಹಿಸಿದ್ದವರು; ಇದೀಗ ಸ್ವಗ್ರಾಮದಲ್ಲಿ ರಬ್ಬರ್ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಸುತ್ತಿದ್ದಾರೆ.
2022ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಸಂದರ್ಶನಕ್ಕೆ ಹಾಜರಾಗಿದ್ದಾಗ ಸಮಿತಿ ಕೇಳಿದ ಪ್ರಶ್ನೆಗೆ ಕಾಜಲ್ ನೀಡಿದ ಉತ್ತರ ಅವರ ಆತ್ಮವಿಶ್ವಾಸವನ್ನು ತೋರಿಸಿತ್ತು. “ಈ ಬಾರಿ ಆಯ್ಕೆಯಾಗದಿದ್ದರೆ ಏನು ಮಾಡುತ್ತೀರಿ?” ಎಂಬ ಪ್ರಶ್ನೆಗೆ ಅವರು “ಮತ್ತೆ ಪ್ರಯತ್ನಿಸುತ್ತೇನೆ” ಎಂದು ನಿಶ್ಚಯವಾಗಿ ಉತ್ತರಿಸಿದ್ದರು. ಅದೇ ದೃಢನಿಶ್ಚಯ ಇಂದು ಅವರನ್ನು ಮಹತ್ವದ ಸಾಧನೆಗೆ ಕೊಂಡೊಯ್ದಿದೆ. ಆ ವೇಳೆ 910ನೇ ರ್ಯಾಂಕ್ ಪಡೆದು ಭಾರತೀಯ ರೈಲ್ವೆ ನಿರ್ವಹಣಾ ಸೇವೆಗೆ ಆಯ್ಕೆಯಾಗಿದ್ದರೂ, ಅವರ ಕನಸು ಮಾತ್ರ ಜಿಲ್ಲಾಧಿಕಾರಿಯಾಗುವುದೇ ಆಗಿತ್ತು.
ಇತ್ತೀಚೆಗೆ ಜಮ್ಮುವಿನಲ್ಲಿ ರೈಲ್ವೆ ತರಬೇತಿಯ ಭಾಗವಾಗಿ ಮಿಲಿಟರಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ಈ ಯಶಸ್ಸಿನ ಸುದ್ದಿ ತಿಳಿಯಿತು. ನೆಟ್ವರ್ಕ್ ಸಮಸ್ಯೆಯಿಂದ ತಮ್ಮ ಫೋನ್ ಕಾರ್ಯನಿರ್ವಹಿಸದಿದ್ದ ಕಾರಣ, ಸ್ನೇಹಿತೆಯ ವಾಟ್ಸಾಪ್ ಕರೆ ಮೂಲಕ 167ನೇ ರ್ಯಾಂಕ್ ಪಡೆದಿರುವ ವಿಚಾರ ತಿಳಿದು ಕಾಜಲ್ ಸಂತಸಗೊಂಡರು.
ಶೈಕ್ಷಣಿಕ ಕ್ಷೇತ್ರದಲ್ಲಿಯೂ ಕಾಜಲ್ ಸದಾ ಮೆರೆದಿದ್ದಾರೆ. 10ನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಗ್ರೇಡ್ ಗಳಿಸಿದ್ದು, ಪಿಯುಸಿಯಲ್ಲಿ ಶೇ.99 ಅಂಕಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಶಾಸ್ತ್ರೀಯ ಸಂಗೀತ ಮತ್ತು ಚಿತ್ರಕಲೆಯಲ್ಲಿ ಸಹ ಆಸಕ್ತಿ ಹಾಗೂ ಪರಿಣತಿ ಹೊಂದಿದ್ದಾರೆ.
ಪ್ರಸ್ತುತ ಜಮ್ಮುವಿನ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಲಕ್ನೋದಲ್ಲಿ ಮುಂದಿನ ತರಬೇತಿಯನ್ನು ಮುಂದುವರಿಸಲಿರುವ ಅವರು, ಬಳಿಕ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ನಿರೀಕ್ಷೆಯಿದೆ.
ದೈಹಿಕ ಸವಾಲುಗಳನ್ನು ಮೀರಿ ಸಾಧನೆಗೈದ ಕಾಜಲ್ ಅವರ ಈ ಪಯಣ ಅನೇಕ ಯುವಕರಿಗೆ ಸ್ಪೂರ್ತಿಯ ದಾರಿಯಾಗಿದೆ.






