ಮಂಗಳೂರು, ಮಾ. 4: ನವಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ) ವತಿಯಿಂದ ಕುಳಾಯಿಯಲ್ಲಿ ನಿರ್ಮಾಣವಾಗುತ್ತಿರುವ ಮೀನುಗಾರಿಕಾ ಬಂದರಿನ ಕಾಮಗಾರಿ ವರ್ಷಕ್ಕಿಂತ ಹೆಚ್ಚು ಅವಧಿಗೆ ಸ್ಥಗಿತಗೊಂಡಿದ್ದ ಬಳಿಕ ಇತ್ತೀಚೆಗೆ ಮರುಪ್ರಾರಂಭಗೊಂಡಿದೆ. ಪ್ರಸ್ತುತ ಬ್ರೇಕ್ವಾಟರ್ ಭಾಗದಲ್ಲಿ ಟೆಟ್ರಾಪಾಡ್ ಅಳವಡಿಸುವ ಕೆಲಸ ನಡೆಯುತ್ತಿದೆ.
ಆದರೆ ತಮ್ಮ ಆಗ್ರಹದಂತೆ ಬ್ರೇಕ್ವಾಟರ್ ಉದ್ದವನ್ನು ವಿಸ್ತರಿಸುವ ಪ್ರಸ್ತಾಪಕ್ಕೆ ಸ್ಪಂದನೆ ಸಿಗದಿರುವುದು ಸ್ಥಳೀಯ ಮೀನುಗಾರರಲ್ಲಿ ಅಸಮಾಧಾನ ಹುಟ್ಟಿಸಿದೆ.
ನವಮಂಗಳೂರು ಬಂದರು ನಿರ್ಮಾಣದ ಸಂದರ್ಭದಲ್ಲಿ ಭೂಸ್ವಾಧೀನದಿಂದ ಅನೇಕ ನಾಡದೋಣಿ ಮೀನುಗಾರರು ಜೀವನೋಪಾಯ ಕಳೆದುಕೊಂಡಿದ್ದರು. ಅವರಿಗೆ ಪರ್ಯಾಯವಾಗಿ ಕುಳಾಯಿಯಲ್ಲಿ ಸರ್ವಋತು ಮೀನುಗಾರಿಕಾ ಬಂದರು ನಿರ್ಮಿಸಬೇಕು ಎಂಬುದು ದೀರ್ಘಕಾಲದ ಬೇಡಿಕೆಯಾಗಿತ್ತು. ₹196.51 ಕೋಟಿ ವೆಚ್ಚದ ಯೋಜನೆಯನ್ನು ಎನ್ಎಂಪಿಎ ಕೈಗೆತ್ತಿಕೊಂಡಾಗ ಮೀನುಗಾರರಲ್ಲಿ ನಿರೀಕ್ಷೆ ಮೂಡಿತ್ತು. ಆದರೆ ಮೂಲ ವಿನ್ಯಾಸ ಹೊರಬಿದ್ದ ಬಳಿಕ ಆ ನಿರೀಕ್ಷೆ ಕ್ಷೀಣಿಸಿತು.
ಮೇದಿಂದ ಸೆಪ್ಟೆಂಬರ್ವರೆಗೆ ಕುಳಾಯಿ ಸಮುದ್ರತೀರದಲ್ಲಿ ಅಲೆಗಳ ತೀವ್ರತೆ 800 ಮೀಟರ್ ದೂರದವರೆಗೂ ವ್ಯಾಪಿಸುತ್ತಿರುವುದರಿಂದ ಪ್ರಸ್ತುತ ವಿನ್ಯಾಸದ ಬ್ರೇಕ್ವಾಟರ್ ಸಮರ್ಪಕವಾಗುವುದಿಲ್ಲ ಎನ್ನುವುದು ಮೀನುಗಾರರ ವಾದ. ಉತ್ತರ ಭಾಗದ ಬ್ರೇಕ್ವಾಟರ್ ಉದ್ದವನ್ನು 831 ಮೀಟರ್ನಿಂದ 1,081 ಮೀಟರ್ಗೆ ಹಾಗೂ ದಕ್ಷಿಣ ಭಾಗದ ಉದ್ದವನ್ನು 262 ಮೀಟರ್ನಿಂದ 981 ಮೀಟರ್ಗೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದ್ದರು. ಈ ಸಂಬಂಧ ಹಲವು ಬಾರಿ ಪ್ರತಿಭಟನೆ ನಡೆಸಲಾಗಿತ್ತು. ಇದರಿಂದ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.
ಮೀನುಗಾರಿಕಾ ಸಚಿವರು, ಸಂಸದರು ಹಾಗೂ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಸಭೆಗಳು ನಡೆದರೂ ಅಂತಿಮ ನಿರ್ಧಾರವಾಗಿಲ್ಲವೆಂದು ದಕ್ಷಿಣ ಕನ್ನಡ ಕರಾವಳಿ ಮೂಲ ಮೀನುಗಾರರ ಸಂಘದ ಅಧ್ಯಕ್ಷ ಅಶ್ವತ್ಥ ಕಾಂಚನ್ ತಿಳಿಸಿದ್ದಾರೆ. “ದೀರ್ಘ ಹೋರಾಟದ ಬಳಿಕ ನಾವು ನಿರಾಶರಾಗಿದ್ದೇವೆ. ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗದೆ ಕೈಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಮೀನುಗಾರ ಶರತ್ ಬಂಗೇರ ಮಾತನಾಡಿ, “ಮೂಲ ವಿನ್ಯಾಸದಲ್ಲೇ ಕಾಮಗಾರಿ ಮುಂದುವರಿಯುತ್ತಿದೆ. ಇದರಿಂದ ಇದು ನಿಜಾರ್ಥದಲ್ಲಿ ಸರ್ವಋತು ಬಂದರಾಗುವುದಿಲ್ಲ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಬ್ರೇಕ್ವಾಟರ್ ಕಾಮಗಾರಿ ದೀರ್ಘಕಾಲ ನಿಲ್ಲಿಸಿದರೆ ಅದರ ಕೋರ್ ಲೇಯರ್ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಎನ್ಎಂಪಿಎ ವಲಯ ತಿಳಿಸಿದೆ. ಈಗಾಗಲೇ ಉತ್ತರ ಭಾಗದಲ್ಲಿ 560 ಮೀಟರ್ ಕಾಮಗಾರಿ ಪೂರ್ಣಗೊಂಡಿದ್ದು, ಅದರಲ್ಲಿ 300 ಮೀಟರ್ ಭಾಗಕ್ಕೆ ಟೆಟ್ರಾಪಾಡ್ ಅಳವಡಿಸಲಾಗಿದೆ. ದಕ್ಷಿಣ ಭಾಗದ 262 ಮೀಟರ್ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ. ಈ ಹಂತದಲ್ಲಿ ವಿನ್ಯಾಸ ಬದಲಾವಣೆ ಮಾಡಲು ಹೆಚ್ಚಿನ ಅನುದಾನ ಅಗತ್ಯವಿದೆ ಎನ್ನುವುದು ಪ್ರಾಧಿಕಾರದ ವಾದ.
ಕಾಮಗಾರಿ ಮರುಪ್ರಾರಂಭದ ಕುರಿತು ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಯೋಜನೆಗೆ ತಾಂತ್ರಿಕ ಸಲಹೆ ನೀಡುತ್ತಿರುವುದು ಸುರತ್ಕಲ್ ಎನ್ಐಟಿಕೆ ಆಗಿದ್ದು, ಗುತ್ತಿಗೆ ಕಾರ್ಯವನ್ನು ಎಸ್ಎಪಿಎಲ್-ಜಿಸಿಸಿ ಜಾಯಿಂಟ್ ವೆಂಚರ್ ಸಂಸ್ಥೆ ನಿರ್ವಹಿಸುತ್ತಿದೆ.
ಬಂದರಿನ ವಿನ್ಯಾಸದಲ್ಲಿ ತಿದ್ದುಪಡಿ ಮಾಡುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಸಂಬಂಧಿಸಿದ ಎನ್ಎಂಪಿಎ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.







