ಉಡುಪಿ, ಮಾ. 2: ಮಂಗಳವಾರ (ಮಾ. 3) ಸಂಭವಿಸುವ ಚಂದ್ರಗ್ರಹಣವು ಭಾರತದಲ್ಲಿ ಅಲ್ಪಾವಧಿಗೆ ಗೋಚರಿಸಲಿದೆ. ಸೂರ್ಯಾಸ್ತದ ಬಳಿಕ ಚಂದ್ರೋದಯವಾಗುವಾಗಲೇ ಗ್ರಹಣ ಆರಂಭಗೊಂಡಿರುತ್ತದೆ. ಸಂಜೆ 6.39ರಿಂದ 6.47ರವರೆಗೆ ಸುಮಾರು ಎಂಟು ನಿಮಿಷಗಳ ಕಾಲ ಗ್ರಹಣ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲಾಗುತ್ತದೆ. ದಿನದ ಬೆಳಗಿನ ಪೂಜಾ ಕಾರ್ಯಕ್ರಮಗಳು ನಿಯಮಿತವಾಗಿ ನಡೆಯಲಿವೆ. ಏಕಾದಶಿ ವಿಧಾನದಂತೆ ಉಪವಾಸಾಚರಣೆ ಪಾಲಿಸಲಾಗುವುದು. ರಾತ್ರಿ ಪೂಜೆ ಸಂಜೆ 7 ಗಂಟೆಯ ನಂತರ ನೆರವೇರಲಿದೆ.
ಗ್ರಹಣಕಾಲದಲ್ಲಿ ಭಕ್ತರು ಮಧ್ವ ಸರೋವರದಲ್ಲಿ ಸ್ನಾನ ಮಾಡಿ ತಟಾಕದ ಬಳಿಯಲ್ಲಿ ಜಪ ಹಾಗೂ ಪಾರಾಯಣಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಹೋಳಿ ಹುಣ್ಣಿಮೆಯ ಅಂಗವಾಗಿ ಸಂಜೆ ಕಡಿಯಾಳಿಗೆ ತೆರಳಿ ಬನ್ನಿ ಪೂಜೆ ನಡೆಯಲಿದೆ. ಹೋಳಿ ವಿಶೇಷ ಪೂಜೆ ಮರುದಿನ ಶ್ರೀಕೃಷ್ಣ ಮಠದಲ್ಲಿ ಜರುಗಲಿದೆ ಎಂದು ಮಠದ ದಿವಾನ್ ಡಾ. ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ.
ಶಾಸ್ತ್ರಾನುಸಾರ ಮಾ. 3ರಂದು ಹಗಲು ಭೋಜನ ತ್ಯಜಿಸುವಂತೆ ಸೂಚಿಸಲಾಗಿದೆ. ಆದರೆ ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯ ಹೊಂದಿರುವವರು ಮಧ್ಯಾಹ್ನದವರೆಗೆ ಆಹಾರ ಸೇವಿಸಬಹುದಾಗಿದೆ. ರಾತ್ರಿ 7 ಗಂಟೆಯ ಬಳಿಕ ಸ್ನಾನ ಮಾಡಿ ಅಡುಗೆ ತಯಾರಿಸಿ ಊಟ ಸ್ವೀಕರಿಸಲು ಅವಕಾಶವಿದೆ.







