ಮಂಗಳೂರು, ಫೆ. 28: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳೊಂದಿಗೆ ನೆರೆಯ ಕೇರಳದ ಪ್ರಯಾಣಿಕರು ಹಾಗೂ ಅನಿವಾಸಿ ಭಾರತೀಯರ ಬಹುಕಾಲದ ಬೇಡಿಕೆಗೆ ಸ್ಪಂದನೆ ದೊರೆತಿದ್ದು, ಮಂಗಳೂರು ಮತ್ತು ಮಸ್ಕತ್ ನಡುವೆ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಪುನರಾರಂಭವಾಗಲಿದೆ.
ಈ ಕುರಿತು ಮಾಹಿತಿ ನೀಡಿದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಏರ್ ಇಂಡಿಯಾ ಎಕ್ಸ್ಪ್ರೆಸ್ ಈ ಸೇವೆಯನ್ನು ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. ಕರಾವಳಿ ಭಾಗದ ಅನೇಕರು ಉದ್ಯೋಗ ಹಾಗೂ ವ್ಯಾಪಾರ ಕಾರಣಗಳಿಂದ ಮಸ್ಕತ್ಗೆ ತೆರಳುತ್ತಿರುವ ಹಿನ್ನಲೆಯಲ್ಲಿ ನೇರ ವಿಮಾನ ಸೇವೆಗೆ ಸಾಕಷ್ಟು ಬೇಡಿಕೆ ವ್ಯಕ್ತವಾಗಿತ್ತು. ಈ ವಿಷಯವಾಗಿ ಸಂಸದರು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸೇವೆ ಮರುಾರಂಭಿಸುವಂತೆ ಮನವಿ ಸಲ್ಲಿಸಿದ್ದರು.
ಪ್ರಸ್ತುತ ವೇಳಾಪಟ್ಟಿಯಂತೆ ವಾರಕ್ಕೆ ಎರಡು ದಿನಗಳು — ಭಾನುವಾರ ಮತ್ತು ಮಂಗಳವಾರ — ಈ ವಿಮಾನ ಹಾರಾಟ ನಡೆಸಲಿದೆ. ನೇರ ಸಂಪರ್ಕದಿಂದ ಪ್ರಯಾಣದ ಅವಧಿ ಕಡಿಮೆಯಾಗುವುದರ ಜೊತೆಗೆ, ಎನ್ಆರ್ಐ ಪ್ರಯಾಣಿಕರಿಗೆ ತಮ್ಮ ಸ್ವಗ್ರಾಮಗಳಿಗೆ ಸುಲಭವಾಗಿ ತಲುಪುವ ಅವಕಾಶ ಸಿಗಲಿದೆ.
ಈ ಹಿಂದೆ ಮಂಗಳೂರು–ಮಸ್ಕತ್ ವಿಮಾನ ಸೇವೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ದೆಹಲಿ, ಮುಂಬೈ ಅಥವಾ ಕಣ್ಣೂರು ಮೂಲಕ ಸಂಪರ್ಕ ವಿಮಾನಗಳನ್ನು ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ವಿಮಾನ ಸೇವೆ ಪುನರಾರಂಭಕ್ಕೆ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಅವರಿಗೆ ಸಂಸದ ಬ್ರಿಜೇಶ್ ಚೌಟ ಕೃತಜ್ಞತೆ ಸಲ್ಲಿಸಿದ್ದಾರೆ.







