ಉಚ್ಚಿಲ, ಫೆ.28: ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಉಚ್ಚಿಲದಲ್ಲಿ ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣದ ಮಹತ್ವದ ಯೋಜನೆಗೆ ಚಾಲನೆ ನೀಡುವ ಸಲುವಾಗಿ ಮಾರ್ಚ್ 1, 2026 (ಅದಿತ್ಯವಾರ) ರಂದು ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣಾ ಸಮಾರಂಭದ ಪ್ರಯುಕ್ತ ಬೃಹತ್ ಸಮಾವೇಶ ಹಾಗೂ ದ್ವಿಚಕ್ರ ವಾಹನ ಜಾಥಾ ಆಯೋಜಿಸಲಾಗಿದೆ.
ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ಮೊಗವೀರ ಸಮಾಜದ ಗುರುಪರಂಪರೆಯಲ್ಲಿ ಒಂಬತ್ತು ತಲೆಮಾರಿನ ಗುರುಗಳು ಸಮಾಜದ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಈ ಪರಂಪರೆಯ ಕೊನೆಯ ಗುರುಗಳಾದ ಹಾಗೂ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸ್ಥಾಪಕರಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿಯನ್ನು ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ.
ಅಷ್ಟಮಂಗಳ ಪ್ರಶ್ನೆಯಲ್ಲಿ ವ್ಯಕ್ತವಾದ ಸೂಚನೆಯ ಮೇರೆಗೆ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಸರ್ವ ಸಮಾಜದ ಸಹಕಾರದಿಂದ ಬೃಹತ್ ಕಂಚಿನ ಪುತ್ಥಳಿ ನಿರ್ಮಾಣಗೊಳ್ಳಲಿದೆ. ಈ ಪ್ರತಿಷ್ಠಾಪನೆ ಸಮಾಜದ ಏಕತೆ, ಸ್ವಾಭಿಮಾನ ಮತ್ತು ಗುರುಭಕ್ತಿಯ ಸಂಕೇತವಾಗಲಿದೆ.

ಕಾರ್ಯಕ್ರಮದ ವಿವರಗಳು
ದಿನಾಂಕ: 01-03-2026 (ಅದಿತ್ಯವಾರ)
📍 ಸ್ಥಳ: ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣ, ಉಚ್ಚಿಲ
⏰ ಸಮಯ :ಬೆಳಿಗ್ಗೆ 9.00 ಗಂಟೆಗೆ
ಉತ್ತರ ಭಾಗದಿಂದ – ಪಾಂಗಾಳ ಶ್ರೀ ಜನಾರ್ಧನ ದೇವಸ್ಥಾನದಿಂದ ಜಾಥಾ ಪ್ರಾರಂಭ
ದಕ್ಷಿಣ ಭಾಗದಿಂದ – ಹೆಜಮಾಡಿ ಟೋಲ್ ಗೇಟ್ನಿಂದ ಜಾಥಾ ಪ್ರಾರಂಭ
ಬೆಳಿಗ್ಗೆ 9.30 ಗಂಟೆಗೆ: ದ್ವಿಚಕ್ರ ವಾಹನ ರ್ಯಾಲಿ ರಾಷ್ಟ್ರೀಯ ಹೆದ್ದಾರಿ 66 ಮೂಲಕ ಉಚ್ಚಿಲ ಕಡೆಗೆ ಪ್ರಯಾಣ
ಬೆಳಿಗ್ಗೆ 10.00 ಗಂಟೆಗೆ: ಗುರುಪಾದ ಕಾಣಿಕೆ ಸಮರ್ಪಣಾ ಕಾರ್ಯಕ್ರಮ ಆರಂಭ
ಬೆಳಿಗ್ಗೆ 11.15 ಗಂಟೆಗೆ: ಸಭಾ ಕಾರ್ಯಕ್ರಮ – ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ವೇದಿಕೆ
ಸುಮಾರು 2000 ದ್ವಿಚಕ್ರ ವಾಹನಗಳು ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಶಿಸ್ತುಬದ್ಧವಾಗಿ ಹಾಗೂ ಸಂಚಾರ ನಿಯಮಗಳನ್ನು ಪಾಲಿಸಿಕೊಂಡು ಜಾಥಾ ನಡೆಸಲಾಗುವುದು.
ಬೃಹತ್ ಸಮಾವೇಶ
ಕೇರಳದ ಉಪ್ಪಳದಿಂದ ಬೈಂದೂರು ತಾಲೂಕಿನ ಶೀರೂರುವರೆಗಿನ 336 ಮೊಗವೀರ ಗ್ರಾಮ ಸಭೆಗಳು ಹಾಗೂ ದೇಶ-ವಿದೇಶಗಳ ಮೊಗವೀರ ಸಂಘಟನೆಗಳಿಂದ ಒಟ್ಟು 10,000ಕ್ಕೂ ಅಧಿಕ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ.
ವಿಶೇಷ ಕಾರ್ಯಕ್ರಮಗಳು
500ಕ್ಕೂ ಅಧಿಕ ಯುವಕರಿಂದ ಅಂಗಾಂಗ ದಾನ ನೋಂದಣಿ ಅಭಿಯಾನ
ಮುಂದಿನ ದಿನಗಳಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜನೆ
ಗುರುಪಾದ ಕಾಣಿಕೆಗಾಗಿ ವಿಶೇಷ ವ್ಯವಸ್ಥೆ
ದೇವಸ್ಥಾನದ ಮುಂಭಾಗದಲ್ಲಿ ನಿರ್ಮಾಣಗೊಳ್ಳುವ ಪುತ್ಥಳಿ ಸ್ಥಳದಲ್ಲಿ ಚಿನ್ನ ಲೇಪಿತ ಪಾದುಕೆಯನ್ನು ಇಡಲಾಗುವುದು. ಇದೇ ಸ್ಥಳದಲ್ಲಿ ಸಮಾಜ ಬಾಂಧವರು ತಮ್ಮ ಗುರುಪಾದ ಕಾಣಿಕೆಯನ್ನು ಸಮರ್ಪಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ಕಾರ್ಯಕ್ರಮದ ನೇತೃತ್ವ
ಈ ಮಹತ್ವದ ಕಾರ್ಯಕ್ರಮವು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ, ನಾಡೋಜ ಡಾ. ಜಿ. ಶಂಕರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಸಮಾಜದ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.

ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣದ ಈ ಐತಿಹಾಸಿಕ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿ, ಗುರುಪಾದ ಕಾಣಿಕೆ ಸಮರ್ಪಿಸುವ ಮೂಲಕ ಶ್ರೀ ದೇವಿ ಹಾಗೂ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪುತ್ಥಳಿ ನಿರ್ಮಾಣ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದೆ.







