ಪುತ್ತೂರು, ಫೆ. 28: ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಮತ್ತೆ ಹೆಚ್ಚಳಗೊಂಡಿದೆ. ಮಾಡನ್ನೂರು, ಕೊಚ್ಚಿ, ಕೊಳಂಬೆ ಭಾಗಗಳಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ನಿರಂತರವಾಗಿ ಕಾಡಾನೆಗಳು ಕೃಷಿ ತೋಟಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿ ಉಂಟುಮಾಡುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಸ್ಥಳೀಯರ ಪ್ರಕಾರ, ಕೇರಳದ ಅರಣ್ಯ ವಲಯದಿಂದ ಕಾಸರಗೋಡು ಜಿಲ್ಲೆಯ ಪರಪ್ಪೆ ಕಾಡಿನ ಮಾರ್ಗವಾಗಿ ಪುತ್ತೂರು ಗಡಿ ಭಾಗದ ಕೃಷಿ ಪ್ರದೇಶಗಳಿಗೆ ಆನೆಗಳ ಗುಂಪುಗಳು ಆಗಾಗ್ಗೆ ದಾಳಿ ನಡೆಸುತ್ತಿವೆ. ಕಳೆದ ಎರಡು ವರ್ಷಗಳಿಂದ ಕಾಡಾನೆಗಳ ಸಂಚಾರ ಹಾಗೂ ದಾಳಿ ಪ್ರಕರಣಗಳು ಗಣನೀಯವಾಗಿ ಹೆಚ್ಚಿವೆ ಎಂದು ಅವರು ತಿಳಿಸಿದ್ದಾರೆ.
ಸುಮಾರು ಎರಡರಿಂದ ಮೂರು ಕಾಡಾನೆಗಳು ಗುಂಪಾಗಿ ರಾತ್ರಿ ವೇಳೆ ಕಾಡಂಚಿನ ಹೊಲಗಳಿಗೆ ಪ್ರವೇಶಿಸುತ್ತಿದ್ದು, ಬೆಳೆ ನಾಶ ಮಾಡುತ್ತಿರುವುದಾಗಿ ರೈತರು ದೂರಿದ್ದಾರೆ. ಅರಣ್ಯ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.







