ಮಂಗಳೂರು, ಫೆ.28: ಹೈದರಾಬಾದ್ ಕೇಂದ್ರವಾಗಿಸಿಕೊಂಡು ಸೈಬರ್ ವಂಚನೆ ಜಾಲ ನಡೆಸುತ್ತಿದ್ದ ಆರು ಮಂದಿಯನ್ನು ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರನ್ನು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಶೇಖ್ ಕರೀಮುಲ್ಲಾ ಅಲಿಯಾಸ್ ರಸೂಲ್ (27), ಕರ್ನೂಲ್ನ ಬುಡಿದಿನ್ನೆ ವಂಶಿ ಅಲಿಯಾಸ್ ಗುರು (21), ತೆಲಂಗಾಣದ ಹೈದರಾಬಾದ್ನ ಪಂಡಿತಿ ಕ್ರಾಂತಿ ಕುಮಾರ್ (36), ಮಂಗಳೂರು ಮೂಲ್ಕಿಯ ಇಬ್ರಾಹಿಂ (35), ಹೈದರಾಬಾದ್ನ ಬಡೆ ಶ್ರೀನಿವಾಸ್ (38) ಹಾಗೂ ನೆಲ್ಲೂರಿನ ಉತ್ಪಲ ಸಂತೋಷ್ ಕೃಷ್ಣ (35) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 18 ಮೊಬೈಲ್ ಫೋನ್ಗಳು, ಒಂದು ಲ್ಯಾಪ್ಟಾಪ್, 12 ಸಿಮ್ ಕಾರ್ಡ್ಗಳು, 15 ಚೆಕ್ ಬುಕ್ಗಳು, 12 ಬ್ಯಾಂಕ್ ಪಾಸ್ ಬುಕ್ಗಳು ಮತ್ತು 18 ಡೆಬಿಟ್ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಬಂದರು ನಿವಾಸಿ ಮೊಹಮ್ಮದ್ ಇಟ್ಬಾಲ್ ಅವರ ಚಾಲ್ತಿ ಖಾತೆಯನ್ನು ವ್ಯವಹಾರದ ನಿಮಿತ್ತ ಸ್ನೇಹಿತ ಇಬ್ರಾಹಿಂ ಕೇಳಿಕೊಂಡಿದ್ದನು. ಅದರಂತೆ ಖಾತೆಗೆ ಸಂಬಂಧಿಸಿದ ಪಾಸ್ ಬುಕ್, ಎಟಿಎಂ ಕಾರ್ಡ್, ಚೆಕ್ ಬುಕ್ ಹಾಗೂ ಲಿಂಕ್ ಆಗಿದ್ದ ಸಿಮ್ ಕಾರ್ಡ್ ಅನ್ನು ನೀಡಲಾಗಿತ್ತು. ಬಳಿಕ ಆ ಖಾತೆ ಸೈಬರ್ ವಂಚನೆಗೆ ಬಳಕೆಯಾಗಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮಂಗಳೂರು ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದಲ್ಲಿ ವಂಚಕರ ತಂಡ ಹೈದರಾಬಾದ್ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆ ಹಚ್ಚಿದರು. ತಕ್ಷಣವೇ ಹೈದರಾಬಾದ್ಗೆ ತೆರಳಿದ ವಿಶೇಷ ತಂಡ ಐವರನ್ನು ಅಲ್ಲಿ ಬಂಧಿಸಿದ್ದು, ಒಬ್ಬನನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆದಿದೆ. ಆರೋಪಿಗಳ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ‘4ರಿಂದ 6 ಶೇಕಡಾ ಕಮಿಷನ್’ ನೀಡುವ ಭರವಸೆ ನೀಡಿ ಬ್ಯಾಂಕ್ ಖಾತೆದಾರರನ್ನು ಆಕರ್ಷಿಸುತ್ತಿದ್ದ ಆರೋಪಿಗಳು, ಸ್ಪಂದಿಸಿದವರ ಖಾತೆಯ ಸಂಪೂರ್ಣ ವಿವರಗಳು ಹಾಗೂ ಒಟಿಪಿ ಸಂಗ್ರಹಿಸಿ ವಿದೇಶದಲ್ಲಿರುವ ವಂಚಕರಿಗೆ ರವಾನಿಸುತ್ತಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ.
72 ಖಾತೆಗಳ ಸುಳಿವು
ಬಂಧಿತರ ಬಳಿಯಿಂದ ವಶಪಡಿಸಿಕೊಂಡ ಮೊಬೈಲ್ ಹಾಗೂ ಲ್ಯಾಪ್ಟಾಪ್ ಪರಿಶೀಲನೆ ವೇಳೆ ಒಟ್ಟು 72 ಬ್ಯಾಂಕ್ ಖಾತೆಗಳ ಮಾಹಿತಿ ಲಭ್ಯವಾಗಿದೆ. ಅವುಗಳಲ್ಲಿ 30 ಖಾತೆಗಳ ವಿರುದ್ಧ ರಾಷ್ಟ್ರೀಯ ಸೈಬರ್ ಕ್ರೈಮ್ ವರದಿ ಪೋರ್ಟಲ್ನಲ್ಲಿ 272ಕ್ಕೂ ಅಧಿಕ ದೂರುಗಳು ದಾಖಲಾಗಿರುವುದು ಪತ್ತೆಯಾಗಿದೆ. ಒಂದು ಖಾತೆಯ ವಿರುದ್ಧವೇ ದೇಶದ ವಿವಿಧ ಭಾಗಗಳಿಂದ ಐದು ದೂರುಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಒಂದೇ ದಿನ 2 ಕೋಟಿ ರೂ. ವ್ಯವಹಾರ
ಫೆಬ್ರವರಿ 26ರಂದು ಒಂದೇ ದಿನ 2 ಕೋಟಿ ರೂಪಾಯಿಗಿಂತ ಹೆಚ್ಚು ಹಣಕಾಸು ವಹಿವಾಟು ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಂಚನೆಗೆ ಬಳಸಿದ ಖಾತೆಗಳ ಹಣಕಾಸು ಚಲನವಲನ ಹಾಗೂ ಸಂಬಂಧಿತ ಪ್ರಕರಣಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.







