ಮಲ್ಪೆ, ಫೆ. 28: ಜಾಗ ಖರೀದಿ ಮಾಡಿಸುವುದಾಗಿ ಹೇಳಿ ಕಿದಿಯೂರಿನ ದೀಪಕ್ ಎಂಬವರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚನೆ ನಡೆಸಿದ ಆರೋಪದ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಂಗಾಪುರದಲ್ಲಿ ಉದ್ಯೋಗದಲ್ಲಿರುವ ದೀಪಕ್ ಅವರಿಗೆ 2000ರಲ್ಲಿ ಪ್ರವೀಣ್ ದೇಶ್ಬಾಗ್ ಪರಿಚಯವಾಗಿದ್ದರು. 2020ರ ಕೋವಿಡ್ ಅವಧಿಯಲ್ಲಿ ಪ್ರವೀಣ್, ಜಮೀನು ಖರೀದಿ–ಮಾರಾಟ ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಾಧ್ಯವೆಂದು ಹೇಳಿ ಪಾಲುದಾರಿಕೆಯಲ್ಲಿ ವ್ಯವಹಾರ ಆರಂಭಿಸುವಂತೆ ಪ್ರಸ್ತಾಪಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ ಪ್ರಶಾಂತ್ ಎಲ್. ಸನಿಲ್ ಅವರು ಕಾರ್ಕಳ ಭಾಗದಲ್ಲಿ ಕಡಿಮೆ ದರಕ್ಕೆ ಜಾಗ ಲಭ್ಯವಿದೆ ಎಂದು ತಿಳಿಸಿ, ಮೂವರು ಸೇರಿ ಜಮೀನು ಖರೀದಿಸುವ ಯೋಜನೆಗೆ ದೀಪಕ್ ಅವರನ್ನು ಒಲಿಸಿಕೊಂಡಿದ್ದರು. ಅವರ ಮಾತು ನಂಬಿ ದೀಪಕ್ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದು, 2020ರ ಸೆಪ್ಟೆಂಬರ್ 28ರಿಂದ 2025ರ ಫೆಬ್ರವರಿ 24ರವರೆಗೆ ಒಟ್ಟು ₹2,11,18,100 ನೀಡಿರುವುದಾಗಿ ತಿಳಿಸಲಾಗಿದೆ.
ಆದರೆ, ಖರೀದಿಸಿದ ಜಾಗವನ್ನು ತಮ್ಮ ಹೆಸರಿಗೆ ನೋಂದಣಿ ಮಾಡದೇ, ಹೂಡಿಕೆ ಮಾಡಿದ ಮೊತ್ತವನ್ನೂ ಹಿಂದಿರುಗಿಸದೇ ಆರೋಪಿಗಳು ವಂಚನೆ ಎಸಗಿದ್ದಾರೆ ಎಂದು ದೂರು ಹೇಳುತ್ತದೆ.
ಇದಲ್ಲದೆ, ಬ್ಯಾಂಕ್ ಆಫ್ ಬರೋಡದ ಶಾಖಾ ವ್ಯವಸ್ಥಾಪಕರು ಆರೋಪಿಗಳೊಂದಿಗೆ ಕೈಜೋಡಿಸಿ ದೀಪಕ್ ಅವರ ನಕಲಿ ಸಹಿ ಬಳಸಿ ಬ್ಯಾಂಕ್ ಖಾತೆ ತೆರೆಯಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಕುರಿತು ದೀಪಕ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರಿಂದ, ನ್ಯಾಯಾಲಯದ ನಿರ್ದೇಶನದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.







