ದಕ್ಷಿಣಕನ್ನಡ, ಫೆ. 23:ಲೂಡೋ ಆಟದ ವೇಳೆ ಪ್ಲಾಸ್ಟಿಕ್ ಕಾಯಿನ್ ಗಂಟಲಲ್ಲಿ ಸಿಲುಕಿಕೊಂಡ ಪರಿಣಾಮ 8 ವರ್ಷದ ಬಾಲಕಿ ಮೃತಪಟ್ಟ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಯಾದ ತನುಷ್ಕ ಎಂಬ ಬಾಲಕಿ ಸಹೋದರರೊಂದಿಗೆ ಆಟವಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಆಟದ ಮಧ್ಯೆ ಕಾಯಿನ್ ಅನ್ನು ಬಾಯಲ್ಲಿ ಹಿಡಿದಿದ್ದ ವೇಳೆ ಅದು ತಪ್ಪಾಗಿ ಗಂಟಲಲ್ಲಿ ಸಿಲುಕಿಕೊಂಡಿದ್ದು, ಸುಮಾರು 20 ನಿಮಿಷಗಳ ಕಾಲ ಉಸಿರಾಟಕ್ಕೆ ತೊಂದರೆಯಾಗಿದ್ದುದಾಗಿ ತಿಳಿದುಬಂದಿದೆ. ಪೋಷಕರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಬಾಲಕಿ ಮೃತಪಟ್ಟಳು ಎಂದು ಮೂಲಗಳು ತಿಳಿಸಿವೆ.
ಚಿಕ್ಕ ಮಕ್ಕಳು ಆಟವಾಡುವಾಗ ಸಣ್ಣ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುವುದು ಸಾಮಾನ್ಯ. ವಿಶೇಷವಾಗಿ ಆರು ತಿಂಗಳ ಬಳಿಕ ಮಕ್ಕಳು ತಮ್ಮ ಸುತ್ತಲಿನ ವಸ್ತುಗಳನ್ನು ಬಾಯಿಂದಲೇ ಅನ್ವೇಷಿಸುವ ಸ್ವಭಾವ ಹೊಂದಿರುತ್ತಾರೆ ಎಂದು ನವದೆಹಲಿ ಸರ್ ಗಂಗಾರಾಮ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ. ಅನಿಲ್ ಅರೋರಾ ತಿಳಿಸಿದ್ದಾರೆ. ಈ ಸ್ವಭಾವವೇ ಕೆಲವೊಮ್ಮೆ ಜೀವಕ್ಕೆ ಅಪಾಯಕಾರಿ ಸ್ಥಿತಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಬಟನ್ ಬ್ಯಾಟರಿ: ಹೊಟ್ಟೆಯಲ್ಲಿ ಕರಗಿದರೆ ರಾಸಾಯನಿಕ ಕ್ರಿಯೆಯಿಂದ ವಿಷಕಾರಿ ಪರಿಣಾಮ ಉಂಟಾಗಬಹುದು; ಇದು ಜೀವಘಾತಕ.
ಅಯಸ್ಕಾಂತಗಳು: ಒಂದಕ್ಕಿಂತ ಹೆಚ್ಚು ಕಾಂತೀಯ ತುಂಡುಗಳನ್ನು ನುಂಗಿದರೆ ಅವು ಕರುಳುಗಳನ್ನು ಒಟ್ಟಿಗೆ ಸೆಳೆದು ಗಂಭೀರ ಹಾನಿ ಉಂಟುಮಾಡಬಹುದು.
ಚೂಪಾದ ವಸ್ತುಗಳು: ಪಿನ್, ಸೂಜಿ ಮುಂತಾದವು ಅನ್ನನಾಳಕ್ಕೆ ಗಾಯ ಉಂಟುಮಾಡಿ ರಕ್ತಸ್ರಾವಕ್ಕೆ ಕಾರಣವಾಗಬಹುದು.
ನಾಣ್ಯಗಳು, ಪ್ಲಾಸ್ಟಿಕ್ ಗೋಲಿಗಳು: ಉಸಿರಿನ ದಾರಿಗೆ ಅಡ್ಡಿಯಾಗಿ ಉಸಿರುಗಟ್ಟುವಿಕೆ ಸಂಭವಿಸಬಹುದು.
ಮಗು ವಸ್ತು ನುಂಗಿದ ಸೂಚನೆಗಳು
ಉಸಿರಾಟದಲ್ಲಿ ತೊಂದರೆ
ಹಠಾತ್ ಕೆಮ್ಮು ಅಥವಾ ಉಸಿರುಗಟ್ಟುವಿಕೆ
ನಿರಂತರ ಅಳುವುದು
ಏಕಾಏಕಿ ವಾಂತಿ
ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ತುರ್ತು ಸಂದರ್ಭದಲ್ಲಿ ಪೋಷಕರು ಏನು ಮಾಡಬೇಕು?
ಗಂಟಲಲ್ಲಿ ವಸ್ತು ಸಿಲುಕಿದೆ ಎಂದು ಅನುಮಾನವಾದರೆ, ಮಗುವನ್ನು ಸ್ವಲ್ಪ ಮುಂದೆ ವಾಲಿಸಿ ಬೆನ್ನಿನ ಮೇಲೆ ನಿಧಾನವಾಗಿ ತಟ್ಟುವುದು ಸಹಾಯಕವಾಗಬಹುದು. ಆದರೆ ಕೈ ಅಥವಾ ಬೆರಳುಗಳನ್ನು ಬಾಯಿಗೆ ಹಾಕಿ ವಸ್ತುವನ್ನು ಹೊರತೆಗೆದಲು ಪ್ರಯತ್ನಿಸಬಾರದು; ಇದರಿಂದ ಅದು ಇನ್ನಷ್ಟು ಒಳಗೆ ಹೋಗುವ ಸಾಧ್ಯತೆ ಇರುತ್ತದೆ.
ವಸ್ತು ನುಂಗಿದ ಅನುಮಾನ ಇದ್ದರೆ ನಾಲ್ಕು ಗಂಟೆಗಳ ಒಳಗೆ ಆಸ್ಪತ್ರೆಗೆ ಕರೆದೊಯ್ಯುವುದು ಅತ್ಯಂತ ಮುಖ್ಯ. ಆರಂಭಿಕ ಹಂತದಲ್ಲಿ ಎಂಡೋಸ್ಕೋಪಿ ಮೂಲಕ ವಸ್ತುವನ್ನು ಸುಲಭವಾಗಿ ತೆಗೆದುಹಾಕಲು ಸಾಧ್ಯವಿರುತ್ತದೆ. ವಸ್ತು ಕರುಳಿಗೆ ತಲುಪಿದರೆ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.
ಮಕ್ಕಳಿಗೆ ಬ್ಯಾಟರಿ ಹೊಂದಿದ ಆಟಿಕೆಗಳು, ಸಣ್ಣ ನಾಣ್ಯಗಳು ಹಾಗೂ ಸಣ್ಣ ಗಾತ್ರದ ವಸ್ತುಗಳು ಸಿಗದಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿದೆ. ಅಲ್ಪ ನಿರ್ಲಕ್ಷ್ಯವೂ ಅಪಾರ ನಷ್ಟಕ್ಕೆ ಕಾರಣವಾಗಬಹುದು ಎಂಬುದನ್ನು ತಜ್ಞರು ಒತ್ತಿಹೇಳಿದ್ದಾರೆ.







