ಮೈಸೂರು,ಫೆ. 21:ಮುಡಾ (ಈಗಿನ ಎಂಡಿಎ) ಹಗರಣದ ಸಂಬಂಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣರನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ ತಕ್ಷಣ, ಮೈಸೂರಿನಲ್ಲಿರುವ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಗುಂಡೂರಾವ್ ನಗರದಲ್ಲಿನ ನಿವಾಸ ಹಾಗೂ ಕಚೇರಿ, ಜೊತೆಗೆ ಬಂಡೀಪಾಳ್ಯದ ಮತ್ತೊಂದು ಮನೆಯಲ್ಲಿ 10ಕ್ಕೂ ಹೆಚ್ಚು ಪೊಲೀಸರ ತಂಡ ಶೋಧ ಕಾರ್ಯಾಚರಣೆ ಕೈಗೊಂಡಿತು. ಪರಿಶೀಲನೆಯ ವೇಳೆ ಹಲವು ದಾಖಲೆಗಳು, ಕಡತಗಳು, ಪೆನ್ ಡ್ರೈವ್ಗಳು, ಹಾರ್ಡ್ ಡಿಸ್ಕ್ಗಳು ಮತ್ತು ಸ್ಕ್ಯಾನರ್ಗಳನ್ನು ಜಪ್ತಿ ಮಾಡಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರ ಪತ್ನಿ ವಿನೋದಾ, ಪೊಲೀಸರು ಶೋಧ ವಾರಂಟ್ ತೋರಿಸಿ ಮನೆ ಪ್ರವೇಶಿಸಿ ತಪಾಸಣೆ ನಡೆಸಿದರು ಎಂದು ಹೇಳಿದರು. ಈ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡು, ಪತಿಯ ಕುರಿತು ಮಾಹಿತಿ ಕೇಳಿದ ಹಿನ್ನೆಲೆಯಲ್ಲಿ ಅಗತ್ಯ ಮಾಹಿತಿಯನ್ನು ನೀಡಿರುವುದಾಗಿ ತಿಳಿಸಿದ್ದಾರೆ.
ಮುಡಾದ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರು ಫೆ.18ರಂದು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿ, ಸ್ನೇಹಮಯಿ ಕೃಷ್ಣ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಪೋಸ್ಟ್ಗಳನ್ನು ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ದೂರು ಆಧಾರವಾಗಿ ಸಿಸಿಬಿ ಸೈಬರ್ ಕ್ರೈಂ ಠಾಣೆ ಪ್ರಕರಣ ದಾಖಲಿಸಿಕೊಂಡು, ಮುಡಾ ಪ್ರಕರಣ ಸಂಬಂಧ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗಿದ್ದ ವೇಳೆ ಸ್ನೇಹಮಯಿ ಕೃಷ್ಣರನ್ನು ಬಂಧಿಸಿ, ಆಡುಗೋಡಿಯ ತಾಂತ್ರಿಕ ವಿಭಾಗದಲ್ಲಿ ವಿಚಾರಣೆ ಮುಂದುವರಿಸಿದೆ.







