ಬೆಂಗಳೂರು, ಫೆ. 21: ವಿಧಾನಸೌಧದಲ್ಲಿ ಮಾಧ್ಯಮಗಳ ಸಂಚಾರ ಮತ್ತು ವರದಿಗಾರಿಕೆಗೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಪತ್ರಕರ್ತರು ಶುಕ್ರವಾರ ಗಾಂಧಿ ಪ್ರತಿಮೆ ಎದುರು ಕಪ್ಪು ಬಟ್ಟೆ ಹಾಗೂ ಕಪ್ಪು ಮಾಸ್ಕ್ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಆದೇಶ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರಕರ್ತರ ನಿಯೋಗ ಮನವಿ ಸಲ್ಲಿಸಿತು.
ಡಿಪಿಎಆರ್ನಿಂದ ವಾರ್ತಾ ಇಲಾಖೆಗೆ ಕಳುಹಿಸಲಾದ ಪ್ರಸ್ತಾವನೆಯಲ್ಲಿ, ವಿಧಾನಸೌಧದ 313 ಮತ್ತು 334 ಕೊಠಡಿಗಳು ಸೇರಿದಂತೆ ಕಾರಿಡಾರ್ಗಳಲ್ಲಿ ಮಾಧ್ಯಮಗಳ ಓಡಾಟದಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಇತರ ಗಣ್ಯರು ಮತ್ತು ಶಾಸಕರ ಭದ್ರತೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೆಂಗಲ್ ಗೇಟ್ ಪೋರ್ಟಿಕೋದಲ್ಲಿ ಮಾತ್ರ ಹೇಳಿಕೆಗಳನ್ನು ಪಡೆಯುವಂತೆ ಸೂಚಿಸಿ ಆದೇಶ ಹೊರಡಿಸಲಾಗಿದೆ.
ಈ ಕ್ರಮವನ್ನು ಮಾಧ್ಯಮ ಸ್ವಾತಂತ್ರ್ಯದ ಮೇಲೆ ಹೇರಲಾಗಿರುವ ನಿರ್ಬಂಧವೆಂದು ಪರಿಗಣಿಸಿರುವ ಪತ್ರಕರ್ತರು, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕಾ ವಲಯದ ಕಾರ್ಯಚಟುವಟಿಕೆಗಳಿಗೆ ಇದು ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಧಾನಸೌಧದಂತಹ ಕೇಂದ್ರ ಸ್ಥಳದಲ್ಲಿ ಮಾಧ್ಯಮಗಳ ಹಾಜರಾತಿ ಸರ್ಕಾರದ ಪಾರದರ್ಶಕತೆಯ ಪ್ರತೀಕವಾಗಿದ್ದು, ಇಂತಹ ನಿಯಂತ್ರಣಗಳು ಜನರಲ್ಲಿ ತಪ್ಪು ಸಂದೇಶವನ್ನು ಮೂಡಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ವರದಿಗಾರರು ಜನಪ್ರತಿನಿಧಿಗಳನ್ನು ನೇರವಾಗಿ ಭೇಟಿ ಮಾಡಿ ಅಭಿಪ್ರಾಯಗಳನ್ನು ಸಂಗ್ರಹಿಸುವಲ್ಲಿ ಈ ನಿರ್ಬಂಧ ಅಡಚಣೆ ತರುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕ ಚರ್ಚೆ ಮತ್ತು ಮಾಹಿತಿ ಪ್ರಸರಣದ ಗುಣಮಟ್ಟ ಕುಗ್ಗುವ ಭೀತಿ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಪತ್ರಿಕಾ ರಂಗದ ಮಹತ್ವವನ್ನು ಅರಿತಿರುವ ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ಮರುಪರಿಶೀಲಿಸಿ, ಹಿಂದಿನಂತೆ ಸುಗಮ ವರದಿಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.
ಇದಾದ ಬಳಿಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಗಾಂಧಿ ಪ್ರತಿಮೆ ಬಳಿ ತೆರಳಿ ಮನವಿ ಪತ್ರ ಸ್ವೀಕರಿಸಿದರು. ನಂತರ ಶಕ್ತಿ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪತ್ರಕರ್ತರ ನಿಯೋಗ, ಆದೇಶ ಹಿಂಪಡೆಯುವಂತೆ ವಿನಂತಿಸಿತು.
ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ವಿಧಿಸಿದ ನಿರ್ಬಂಧ ತಮ್ಮ ಸೂಚನೆಯ ಮೇಲೇ ಜಾರಿಗೆ ಬಂದದ್ದು ಎಂದು ಸ್ಪಷ್ಟಪಡಿಸಿದರು. ಇದು ಸಂಪೂರ್ಣ ನಿರ್ಬಂಧವಲ್ಲ, ಸಮಂಜಸ ನಿಯಂತ್ರಣ ಮಾತ್ರ ಎಂದು ಹೇಳಿದರು. “ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು. ನಾವು ಕರೆದಾಗ ಬನ್ನಿ. ವಿಧಾನಸೌಧಕ್ಕೆ ಬಾರದಿರಲಿ ಎಂದು ಹೇಳಿಲ್ಲ. ಆದೇಶವನ್ನು ಹಿಂಪಡೆಯುವುದಿಲ್ಲ; ಆದರೆ ನಿಮ್ಮ ಮನವಿಯನ್ನು ಪರಿಶೀಲಿಸುತ್ತೇನೆ,” ಎಂದು ಮುಖ್ಯಮಂತ್ರಿ ತಿಳಿಸಿದರು.







