ಮಲ್ಪೆ, ಫೆ. 21: ಮೀನು ವ್ಯಾಪಾರಿಯೊಬ್ಬರ ಮೇಲೆ ಖಾರದ ಪುಡಿ ಎರಚಿ, ಚಾಕು ತೋರಿಸಿ ಬೆದರಿಕೆ ಹಾಕಿ ಚಿನ್ನದ ಸರ ಕಸಿದುಕೊಂಡ ಘಟನೆ ಶುಕ್ರವಾರ ಮುಂಜಾನೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ನಡೆದಿದೆ.
ಬಡಾನಿಡಿಯೂರು ಗ್ರಾಮದ ದಯಾನಂದ ಕುಂದರ್ ಅವರು ಪ್ರತಿದಿನದಂತೆ ಬೆಳಗಿನ 3 ಗಂಟೆ ಸುಮಾರಿಗೆ ಮೀನು ವ್ಯಾಪಾರಕ್ಕಾಗಿ ಬಂದರಿಗೆ ಆಗಮಿಸಿದ್ದರು. ಬೆಳಗ್ಗೆ 4.30ರ ವೇಳೆಗೆ ಬಂದರು ಸಮೀಪದ ಸಾಹುಕಾರ್ ಬಾರ್ ಬಳಿಯ ತಮ್ಮ ಕಚೇರಿ ಶೌಚಾಲಯಕ್ಕೆ ತೆರಳಿ ಮರಳುವಾಗ ಮುತ್ತಣ್ಣ ಎಂಬ ವ್ಯಕ್ತಿ ಮೀನಿನ ವಿಚಾರ ಕೇಳುವ ನೆಪದಲ್ಲಿ ಸಂಪರ್ಕಿಸಿದ್ದಾನೆ.
ಅವಕಾಶ ಪಡೆದು ದಯಾನಂದ ಅವರ ಮುಖಕ್ಕೆ ಖಾರದ ಪುಡಿ ಎರಚಿ, ಸ್ವಲ್ಪ ದೂರಕ್ಕೆ ಎಳೆದುಕೊಂಡು ಹೋಗಿದ್ದಾನೆ. ಬಳಿಕ ಇನ್ನಿಬ್ಬರು ಅಪರಿಚಿತರು ಸ್ಥಳಕ್ಕೆ ಆಗಮಿಸಿ ಚಾಕು ತೋರಿಸಿ ಕುತ್ತಿಗೆಯಲ್ಲಿದ್ದ ಸುಮಾರು 6 ಪವನ್ ತೂಕದ ಚಿನ್ನದ ಸರವನ್ನು ಒಪ್ಪಿಸಲು ಒತ್ತಾಯಿಸಿದ್ದಾರೆ. ಅವರು ನಿರಾಕರಿಸಿದಾಗ ಹಲ್ಲೆ ನಡೆಸಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಘಟನೆಯ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಜೀವಕ್ಕೆ ಅಪಾಯ ಉಂಟುಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







