ಮಂಗಳೂರು, ಫೆ.20: ಮಂಗಳೂರು–ಮುಂಬಯಿ ಮಾರ್ಗದಲ್ಲಿ ಸಂಚರಿಸುವ ಮತ್ಸ್ಯಗಂಧ ಎಕ್ಸ್ಪ್ರೆಸ್ ಹಾಗೂ ಮಂಗಳೂರು ಜಂಕ್ಷನ್–ಮುಂಬಯಿ ಸಿಎಸ್ಎಂಟಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳು ಕಳೆದ ಕೆಲ ತಿಂಗಳಿಂದ ನಿರಂತರ ವಿಳಂಬವಾಗಿ ಸಂಚರಿಸುತ್ತಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಮಂಗಳೂರಿನಿಂದ ಮುಂಬಯಿ ಎಲ್ಟಿಟಿ ಕಡೆಗೆ ಹೊರಡುವ ಮತ್ಸ್ಯಗಂಧ ಎಕ್ಸ್ಪ್ರೆಸ್ (12620) ನಿಗದಿತ ವೇಳೆಗೆ ಬೆಳಗ್ಗೆ 5.57ಕ್ಕೆ ಥಾಣೆ ತಲುಪಬೇಕಿದ್ದರೂ, ಫೆ.14ರಂದು 6.41ಕ್ಕೆ, ಫೆ.15ರಂದು ಮಧ್ಯಾಹ್ನ 12.27ಕ್ಕೆ ಹಾಗೂ ಫೆ.16ರಂದು ಬೆಳಗ್ಗೆ 7.05ಕ್ಕೆ ತಲುಪಿದೆ. ಕಳೆದ ವಾರದಲ್ಲಿ ಈ ರೈಲು ಸರಾಸರಿ 1 ಗಂಟೆ 36 ನಿಮಿಷಗಳ ವಿಳಂಬವಾಗಿ ಥಾಣೆ ತಲುಪಿರುವುದು ದಾಖಲಾಗಿದೆ.
ಅದೇ ರೀತಿ, ಎಲ್ಟಿಟಿಯಿಂದ ಮಂಗಳೂರಿಗೆ ಸಂಚರಿಸುವ ಮತ್ಸ್ಯಗಂಧ ಎಕ್ಸ್ಪ್ರೆಸ್ (12619) ಬೆಳಗ್ಗೆ 5.18ಕ್ಕೆ ಉಡುಪಿ ತಲುಪಬೇಕಾಗಿದ್ದರೂ, ಫೆ.14ರಂದು 7.24ಕ್ಕೆ, ಫೆ.15ರಂದು 7.56ಕ್ಕೆ ಹಾಗೂ ಫೆ.16ರಂದು 7.33ಕ್ಕೆ ಆಗಮಿಸಿದೆ. ಒಂದು ವಾರದ ಅವಧಿಯಲ್ಲಿ ಈ ರೈಲು ಉಡುಪಿಗೆ ಸರಾಸರಿ 2 ಗಂಟೆ 30 ನಿಮಿಷ ಹಾಗೂ ಮಂಗಳೂರಿಗೆ 1 ಗಂಟೆ 43 ನಿಮಿಷಗಳ ವಿಳಂಬವಾಗಿ ತಲುಪಿದೆ.
8 ಗಂಟೆಗಳಿಗೂ ಹೆಚ್ಚು ವಿಳಂಬ
ಮಂಗಳೂರು ಜಂಕ್ಷನ್–ಸಿಎಸ್ಎಂಟಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (12134) ಮುಂಜಾನೆ 3.48ಕ್ಕೆ ಥಾಣೆ ತಲುಪಬೇಕಿದ್ದರೂ, ಫೆ.14ರಂದು ಮಧ್ಯಾಹ್ನ 12.22ಕ್ಕೆ ತಲುಪಿದ್ದು, 8 ಗಂಟೆಗಳಿಗಿಂತ ಹೆಚ್ಚು ವಿಳಂಬವಾಗಿದೆ. ಫೆ.15ರಂದು ಬೆಳಗ್ಗೆ 7.50ಕ್ಕೆ ಹಾಗೂ ಫೆ.16ರಂದು 11.14ಕ್ಕೆ ತಲುಪಿದೆ. ವಾರದ ಸರಾಸರಿ ಲೆಕ್ಕದಲ್ಲಿ ಈ ರೈಲು ಮಂಗಳೂರು ಜಂಕ್ಷನ್ನಿಂದ 1 ಗಂಟೆ 28 ನಿಮಿಷ ವಿಳಂಬವಾಗಿ ಹೊರಟು, ಥಾಣೆಗೆ 6 ಗಂಟೆ 4 ನಿಮಿಷಗಳ ವಿಳಂಬವಾಗಿ ತಲುಪಿದೆ.
ಇದೇ ಮಾರ್ಗದ ಸೀಸ್ಎಂಟಿ–ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ (12133) ಬೆಳಗ್ಗೆ 11.26ಕ್ಕೆ ಉಡುಪಿ ತಲುಪಬೇಕಿದ್ದರೂ, ಫೆ.14ರಂದು 12.36ಕ್ಕೆ, ಫೆ.15ರಂದು ಅಪರಾಹ್ನ 3.06ಕ್ಕೆ ಹಾಗೂ ಫೆ.16ರಂದು 2.17ಕ್ಕೆ ತಲುಪಿದೆ. ವಾರದ ಅವಧಿಯಲ್ಲಿ ಉಡುಪಿ ನಿಲ್ದಾಣಕ್ಕೆ ಸರಾಸರಿ 2 ಗಂಟೆ 10 ನಿಮಿಷ ಹಾಗೂ ಮಂಗಳೂರು ಜಂಕ್ಷನ್ಗೆ 1 ಗಂಟೆ 42 ನಿಮಿಷಗಳ ವಿಳಂಬವಾಗಿದೆ.
ಪ್ರಯಾಣಿಕರ ಅಸಮಾಧಾನ
ರೈಲುಗಳ ನಿರಂತರ ವಿಳಂಬದಿಂದ ಪ್ರಯಾಣಿಕರು ಪ್ರತಿದಿನ ದೂರುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. “ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳದಿದ್ದರೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ,” ಎಂದು ಮಂಗಳೂರಿನ ಟ್ರಾವೆಲ್ ಏಜೆನ್ಸಿಯ ಕಿಶೋರ್ ಮರೋಳಿ ತಿಳಿಸಿದ್ದಾರೆ.
ಕಳೆದ ಆರು ತಿಂಗಳಿಂದ ಈ ಸಮಸ್ಯೆ ಮುಂದುವರಿದಿದ್ದು, ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಕೊಂಕಣ ರೈಲ್ವೇ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ರೈಲು ಯಾತ್ರಿ ಸಂಘದ ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿ’ಸೋಜಾ ತಿಳಿಸಿದ್ದಾರೆ.
ಹಳಿ ನಿರ್ವಹಣೆಯೇ ಕಾರಣ
ರತ್ನಗಿರಿ ಹಾಗೂ ಕಾರವಾರ ವಿಭಾಗಗಳಲ್ಲಿ ಹಳಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ಸಂಚಾರ ವಿಳಂಬವಾಗುತ್ತಿದೆ ಎಂದು ಕೊಂಕಣ ರೈಲ್ವೇ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುನಿಲ್ ನರ್ಕರ್ ಸ್ಪಷ್ಟಪಡಿಸಿದ್ದಾರೆ.







