ಉಡುಪಿ, ಫೆ. 16:ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶಿವರಾತ್ರಿ ಪ್ರಯುಕ್ತ ನಡೆದ ಜಾಗರಣೆ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ಪರ್ಯಾಯ ಶ್ರೀ ಶೀರೂರು ಮಠದ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಎಳ್ಳು ಗಂಟು ದೀಪ ಪ್ರಜ್ವಲಿಸಿ, ದೇಶದ ಸಮಸ್ತ ಜನತೆಗೆ ಎದುರಾಗುವ ಕಂಟಕಗಳು ನಿವಾರಣೆಯಾಗಲಿ ಎಂದು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಅಶ್ವಥ್ ಭಾರದ್ವಾಜ್ ರಂಗೋಲಿ ಬಿಡಿಸುವ ಮೂಲಕ ವಿಶೇಷ ಅಲಂಕಾರ ಮಾಡಿದರು. ಹೆರ್ಗ ರವೀಂದ್ರ ಭಟ್ ಹಾಗೂ ಕಲ್ಯ ಅಶೋಕ ಆಚಾರ್ಯರು ಶಿವರಾತ್ರಿಯ ಮಹಿಮೆ ಮತ್ತು ಆಚರಣೆಯ ಮಹತ್ವ ಕುರಿತು ಪ್ರವಚನ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷಿತಿಜ ಬೆಂಗಳೂರು ತಂಡದಿಂದ ಯಕ್ಷಗಾನ ಹಾಗೂ ಭರತನಾಟ್ಯ ಡ್ಯುಯೆಟ್ ಪ್ರದರ್ಶನ ನಡೆಯಿತು. ಮಧೂರು ಬಾಲಸುಬ್ರಮಣ್ಯಂ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮ, ಶ್ರೀಕಾಂತ್ ನಾಯಕ್ ಹಾಗೂ ತಂಡದಿಂದ ಭಜನಾ ಕಾರ್ಯಕ್ರಮಗಳು ಜರುಗಿದವು. ಸಂಘ-ಸಂಸ್ಥೆಗಳ ಸದಸ್ಯರಿಂದ ರುದ್ರ ಪಾರಾಯಣ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣವೂ ನಡೆಯಿತು.
ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಸಂದೀಪ್ ಮಂಜ, ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ರಘುಪತಿ ರಾಯರು, ಮಾಜಿ ಅಧ್ಯಕ್ಷರಾದ ವಿಷ್ಣು ಪಾಡಿಗಾರ್, ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಸದಸ್ಯರು ಹಾಗೂ ಸದಸ್ಯೆಯರು, ತುಶಿಮಾ ಅಧ್ಯಕ್ಷರಾದ ಜಯರಾಮ ಆಚಾರ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶೀರೂರು ಮಠದ ವಿದ್ವಾಂಸರಾದ ಸುದರ್ಶನ್ ಆಚಾರ್ಯ ಮತ್ತು ಸಗ್ರಿ ಆನಂದತೀರ್ಥ ಆಚಾರ್ಯ ನಿರೂಪಿಸಿದರು.







