ಬೆಂಗಳೂರು, ಫೆ. 16:ಸರ್ಕಾರಿ ಬಸ್ಗಳ ಪ್ರಯಾಣ ದರ ಹೆಚ್ಚಳವಾದ ಬಳಿಕ ಇದೀಗ ಲಗೇಜು ದರದಲ್ಲೂ ಏರಿಕೆ ಜಾರಿಯಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ತನ್ನ ಬಸ್ಗಳಲ್ಲಿ ಸಾಗಿಸುವ ಲಗೇಜು ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, ಶಿವರಾತ್ರಿಯ ಮರುದಿನದಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಈ ನಿರ್ಧಾರದ ಬೆನ್ನಲ್ಲೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್ಡಬ್ಲ್ಯೂಕೆಆರ್ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ) ವ್ಯಾಪ್ತಿಯಲ್ಲೂ ಲಗೇಜು ದರ ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ನಿಯಮಗಳ ಪ್ರಕಾರ, ಪ್ರಯಾಣಿಕರಿಗೆ 30 ಕೆಜಿವರೆಗೆ ಲಗೇಜು ಉಚಿತವಾಗಿ ಸಾಗಿಸಲು ಅವಕಾಶವಿದೆ. ಅದಕ್ಕಿಂತ ಹೆಚ್ಚು ತೂಕದ ಲಗೇಜಿಗೆ ನಿಗದಿತ ದರ ಅನ್ವಯವಾಗುತ್ತದೆ. ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಕರೊಂದಿಗೆ ಸಾಗುವ ಲಗೇಜು ಮತ್ತು ಪ್ರಯಾಣಿಕರಿಲ್ಲದೆ ಕಳುಹಿಸುವ ಲಗೇಜು ಎರಡಕ್ಕೂ ಅವಕಾಶವಿದ್ದು, ಪರಿಷ್ಕೃತ ದರವು ಈ ಎರಡೂ ವರ್ಗಗಳಿಗೆ ಅನ್ವಯವಾಗಲಿದೆ.
ಸಾಮಾನ್ಯವಾಗಿ ಬಸ್ ಪ್ರಯಾಣ ದರ ಏರಿಕೆಯ ಜೊತೆಗೆ ಲಗೇಜು ದರದಲ್ಲೂ ಬದಲಾವಣೆ ಆಗುವುದು ರೂಢಿ. ಕಳೆದ ವರ್ಷ ಜನವರಿಯಲ್ಲಿ ಪ್ರಯಾಣ ದರ ಏರಿಕೆಯಾದರೂ, ಲಗೇಜು ದರದಲ್ಲಿ ಪರಿಷ್ಕರಣೆ ಮಾಡಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಫೆಬ್ರವರಿ 16ರಿಂದ ಲಗೇಜು ದರ ಏರಿಕೆ ಜಾರಿಗೆ ತರಲಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ. ಇದಕ್ಕೂ ಮೊದಲು 2021ರ ಡಿಸೆಂಬರ್ನಲ್ಲಿ ಲಗೇಜು ದರ ಹೆಚ್ಚಿಸಲಾಗಿತ್ತು.







