ಉಡುಪಿ: ಕರಾವಳಿಯ ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಖ್ಯಾತ ನಾಗಸ್ವರ ವಾದಕ ಹೆರ್ಗ ಸುಂದರ ಶೇರಿಗಾರ್ (ಎಳ್ಳಾರೆ) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಪರ್ಕಳ, ಉಡುಪಿ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ನಡೆಯುತ್ತಿದ್ದ ಶುಭ ಸಮಾರಂಭಗಳು, ದೇವಸ್ಥಾನ ಹಾಗೂ ದೈವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಗಸ್ವರ ವಾದನದ ಮೂಲಕ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸುಂದರ ಶೇರಿಗಾರ್ ಅವರು, ಸ್ಯಾಕ್ಸೊಫೋನ್ ವಾದಕರಾಗಿಯೂ ವಿಶೇಷ ಗುರುತಿಸಿಕೊಂಡಿದ್ದರು.
ತಮ್ಮ ಸಂಗೀತ ಪ್ರತಿಭೆಯ ಮೂಲಕ ಅಪಾರ ಶಿಷ್ಯವೃಂದವನ್ನು ಬೆಳೆಸಿಕೊಂಡಿದ್ದ ಅವರು, ಕರಾವಳಿಯ ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ಕಲಾ ಸೇವೆ ಹಾಗೂ ಸರಳ ವ್ಯಕ್ತಿತ್ವಕ್ಕೆ ಅನೇಕರು ಅಭಿಮಾನಿಗಳಾಗಿದ್ದರು.
ಸುಂದರ ಶೇರಿಗಾರ್ ಅವರ ನಿಧನದಿಂದ ಕರಾವಳಿಯ ಸಂಗೀತ ಕ್ಷೇತ್ರ ಒಬ್ಬ ಹಿರಿಯ ಕಲಾವಿದನನ್ನು ಕಳೆದುಕೊಂಡಂತಾಗಿದೆ. ಅವರ ಅಗಲಿಕೆಗೆ ಸಂಗೀತಾಸಕ್ತರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೃತರು ನಾಲ್ವರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನನ್ನು ಅಗಲಿದ್ದಾರೆ.






