ಉಡುಪಿ :ಶೃದ್ದೆ ಹಾಗೂ ಗುರಿಯನ್ನಿಟ್ಟುಕೊಂಡು ಮುನ್ನಡೆಯುವ ವಿದ್ಯಾರ್ಥಿಗಳು ಬದುಕಿನಲ್ಲಿ ಯಶಸ್ಸನ್ನು ಕಾಣುತ್ತಾರೆ. ಸಂಸ್ಕಾರವಂತ ವಿದ್ಯಾವಂತರಾದವರು ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಿ ದೇಶದ ಉನ್ನತಿಗೆ ಕಾರಣೀಕರ್ತರಾಗಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯಕ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಆರ್.ಕೆ. ನಾಯಕ್ ಮತ್ತು ರಮಾದೇವಿ ಸಮಾಜಸೇವಾ ನಿಧಿ ಇವರ ಆಶ್ರಯದಲ್ಲಿ ನಡೆದ ವಿದ್ಯಾರ್ಥಿವೇತನ ಮತ್ತು ಆನಾರೋಗ್ಯ ಪೀಡಿತ ಕುಟುಂಬಗಳಿಗೆ ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಕ್ಕಳಿಗೆ ತಮ್ಮಿಂದ ವೈಯಕ್ತಿಕ ಸಹಾಯಧನ ನೀಡಿ ಮಕ್ಕಳ ವಿದ್ಯೆಗೆ ಪ್ರಾಧಾನ್ಯತೆ ನೀಡುತ್ತಿರುವ ಮತ್ತು ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಸಹಾಯಹಸ್ತ ಚಾಚುತ್ತಿರುವ ದೇವತಾ ಕಾರ್ಯವನ್ನು ಶ್ಲಾಘಿಸಿ, ಸಮಾಜದಲ್ಲಿ ಆರ್ಥಿಕವಾಗಿ ಸಶಕ್ತರಿರುವವರೆಲ್ಲರೂ ಈ ರೀತಿ ಸಮಾಜದ ಋಣವನ್ನು ತೀರಿಸುವ ಕೆಲಸ ಮಾಡಬೇಕು ಎಂದು ಶುಭ ಹಾರೈಸಿದರು.

ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಣಿಪಾಲ ಆರ್.ಎಸ್.ಬಿ ಸಂಘದ ಅಧ್ಯಕ್ಷ ಉಪೇಂದ್ರ ನಾಯಕ್ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಖ್ಯಾತ ಜ್ಯೋತಿಷಿ, ನಿವೃತ್ತ ಮುಖ್ಯೋಪಾಧ್ಯಾಯ ಉಪೇಂದ್ರ ಪ್ರಭು ಮಾಣಿಯೂರು ಅವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಪಿ.ಯು.ಸಿಯಲ್ಲಿ ರಾಜ್ಯ ಮಟ್ಟದ ರ್ಯಾಂಕ್ ಪಡೆದ ಮೂವರು ವಿದ್ಯಾರ್ಥಿಗಳಿಗೆ ಆರ್.ಕೆ. ನಾಯಕ್ ಅವರು ಗೌರವಾರ್ಪಣೆ ಮಾಡಿದರು. ಒಟ್ಟು 36 ವಿದ್ಯಾರ್ಥಿಗಳಿಗೆ ತಲಾ ರೂಪಾಯಿ ಮೂರೂವರೆ ಸಾವಿರದಂತೆ ವಿದ್ಯಾರ್ಥಿ ವೇತನ ಮತ್ತು 2 ಅನಾರೋಗ್ಯ ಪೀಡಿತ ಕುಟುಂಬಗಳಿಗೆ ವೈದ್ಯಕೀಯ ಸಹಾಯ ಹಸ್ತವಾಗಿ ತಲಾ ಹತ್ತು ಸಾವಿರದಂತೆ ನೀಡಲಾಯಿತು.
ವಿದ್ಯಾರ್ಥಿ ವೇತನದ ಫಲಾನುಭವಿಗಳು, ಉಡುಪಿ, ಕಾರ್ಕಳ, ಬೆಂಗಳೂರು, ಬೆಳಗಾವಿ, ಕಾಸರಗೋಡು, ಸುಳ್ಯ ಮತ್ತು ಪುತ್ತೂರು ವ್ಯಾಪ್ತಿಗೆ ಸೇರಿದವರಾಗಿದ್ದರು.
ಮುಖ್ಯ ಅತಿಥಿ ಉಪೇಂದ್ರ ನಾಯಕ್ ಮತ್ತು ಅಧ್ಯಕ್ಷತೆ ವಹಿಸಿದ್ದ ಉಪೇಂದ್ರ ಪ್ರಭು ಅವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಕು! ಸ್ಮೃತಿ ಮತ್ತು ವರ್ಷ ಪ್ರಾರ್ಥನೆಗೈದರು. ಗುರುರಾಜ ನಾಯಕ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






