ಉಡುಪಿ ಜುಲೈ 29: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ, ಜಿಲ್ಲಾ ಆಸ್ಪತ್ರೆ ಉಡುಪಿ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (ಕಭೀ), ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮೆದುಳು ದಿನಾಚರಣೆ. (ಜುಲೈ 22 ರಿಂದ 28) ರ ಸಮಾರೋಪ ಸಮಾರಂಭವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಬೆಳ್ವೆ ಯ ಶ್ರೀ ಗಣೇಶ್ ಕ್ಯಾಶು ಫ್ಯಾಕ್ಟರಿ ಯಲ್ಲಿ ಬುಧವಾರ ಜುಲೈ 29 ರಂದು ಹಮ್ಮಿಕೊಳ್ಳಲಾಯಿತು ಹಾಗೂ ಈ ದಿನದಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ವೆ ಯ ಸಿಬ್ಬಂದಿಯವರಿಗೂ ಜನಸಾಮಾನ್ಯರ ವರೆಗೆ ಮಾಹಿತಿ ತಲುಪಿಸುವ ಸಲುವಾಗಿ ಮಾಹಿತಿಯನ್ನು ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮಾನ್ಯ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳು ಹಾಗೂ ಕಭೀ ಕಾರ್ಯಕ್ರಮದ ನೂಡಲ್ ಅಧಿಕಾರಿಗಳಾದ ಡಾ. ಲತಾ ನಾಯಕ್ ಅವರು ಮಾತನಾಡಿ, ಕಭೀ ಕಾರ್ಯಕ್ರಮದಲ್ಲಿ, ನರವೈಜ್ಞಾನಿಕ ಖಾಯಿಲೆಗಳಾದ ತಲೆನೋವು, ಪಾರ್ಶ್ವವಾಯು, ಅಪಸ್ಮಾರ ಹಾಗೂ ಡಿಮೆಂಶಿಯ ಕುರಿತು ವಿಶ್ಲೇಷಿಸುತ್ತಾ ಅಂತಹ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಕಭೀ ತಂಡ ದಲ್ಲಿ ವೈದ್ಯಾಧಿಕಾರಿಗಳು, ಜಿಲ್ಲಾ ಸಂಯೋಜಕರು, ಸ್ಪೀಚ್ ಥೆರಪಿಸ್ಟ್, ಫಿಸಿಯೋ ಥೆರಪಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್ ಹಾಗೂ ಸ್ಟಾಫ್ ನರ್ಸ್ ಕಾರ್ಯನಿರ್ವಹಿಸುತ್ತಿದ್ದು, ನರವೈಜ್ಞಾನಿಕ ಖಾಯಿಲೆ ಇರುವಂತಹ ವ್ಯಕ್ತಿಗೆ ಬೆಂಗಳೂರಿನ ನಿಮ್ಹಾನ್ಸ್ ಇಂದ ಟೆಲಿ ನ್ಯೂರೋಲಾಜಿ ಎಂಬ ಸೇವೆಯನ್ನೂ ಸಹ ನೀಡಲಾಗುತ್ತದೆ. ಹೀಗೆ ಕಭೀ, ಉತ್ತಮವಾದ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಹಾಗೂ ಕಭೀ ತಂಡ ನಿಮ್ಮೊಂದಿಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಹಾಗೂ ಇನ್ನಷ್ಟು ಜನರಿಗೆ ತಿಳಿಸಿ ಸಹಕರಿಸಿ ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ವೆ ಯ ವೈದ್ಯಾಧಿಕಾರಿಗಳಾದ ಡಾ. ರೂಪಾ ರವರು ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ್ದು ಇಂದು ನುರಿತ ವಾಗ್ಮಿ ಯಾದ ಡಾ. ಲತಾ ನಾಯಕ್ ರವರು ನಮ್ಮೊಂದಿಗೆ ಇದ್ದು ಮಾಹಿತಿ ನೀಡಿರುವುದು ನಿಜವಾಗಿಯೂ ಖುಷಿ ಯ ವಿಷಯ. ಈ ತರಹದ ಕಾರ್ಯಕ್ರಮ ಬಹಳ ಮುಖ್ಯವಾಗಿದೆ ಹಾಗೂ ಮೆದುಳು ಆರೋಗ್ಯ ಉತ್ತಮವಾಗಿಸಿಕೊಳ್ಳಬೇಕಾಗುವುದು ಬಹಳ ಮುಖ್ಯ ಎಂದು ತಿಳಿಸಿದರು.
ವೇದಿಕೆ ಯಲ್ಲಿ ಉಪಸ್ಥಿತರಿದ್ದ ಡಾ ಅವನಿ ಶೆಟ್ಟಿ, ವೈದ್ಯಾಧಿಕಾರಿಗಳು, ಕಭೀ ಕಾರ್ಯಕ್ರಮ, ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಭೀ ಕಾರ್ಯಕ್ರಮದ ವಿಷಯ ಸ್ಪಷ್ಟನೆ ಮಾಡಿದರು.
ಮೆದುಳು ಆರೋಗ್ಯ ದ ಜೊತೆಗೆ ಬಿ. ಪಿ. ಶುಗರ್ ಸ್ಕ್ರೀನಿಂಗ್ ನ್ನು ಸಹ ನಡೆಸಲಾಯಿತು.
ಕಭೀ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಶ್ರೀಮತಿ ಅರ್ಪಿತಾ ಬ್ರಹ್ಮಾವರ ರವರು ಜಿಲ್ಲಾಸ್ಪತ್ರೆ ಯ ಬ್ರೈನ್ ಹೆಲ್ತ್ ಕ್ಲಿನಿಕ್ ನಲ್ಲಿರುವ ಸಿಬ್ಬಂಧಿಗಳು, ಅವರು ನಿರ್ವಹಿಸುವ ಕಾರ್ಯ ಹಾಗೂ ದೊರಕುವ ಸೌಲಭ್ಯದ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಕಭೀ ಕಾರ್ಯಕ್ರಮ ದ ಸ್ಪೀಚ್ ಥೆರಪಿಸ್ಟ್ ಆದ ಕು. ಹೇಮಾ ಪಿ ಯವರು, ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ಸಮುದಾಯದ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ದವರ ಸಹಕಾರದೊಂದಿಗೆ ಕಾರ್ಯಕ್ರಮವು ಉತ್ತಮವಾಗಿ ಮೂಡಿಬಂದಿತು.
ಕಾರ್ಯಕ್ರಮವನ್ನು ಆರೋಗ್ಯ ನಿರೀಕ್ಷಣಾಧಿಕಾರಿ ಯಾದ ಶ್ರೀಮತಿ ವಿಜಯ ಕುಮಾರಿ ರವರು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.







