ಉಡುಪಿ, ಜು. 24: ಕರ್ನಾಟಕ ಪಬ್ಲಿಕ್ ಸ್ಕೂಲ್, ಬಿದ್ಕಲ್ ಕಟ್ಟೆ (ಪ್ರೌಢಶಾಲೆ)ಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಹಾಗೂ ಶಿವಶಾಂತಿ ಲಯನ್ಸ್ ಕ್ಲಬ್, ಮೊಳಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ “ಮಾನವ ಕಳ್ಳ ಸಾಗಣೆ ಜಾಗೃತಿ ಶಿಬಿರ” ಶುಕ್ರವಾರ ನಡೆಯಿತು.
ಶಾಲೆಯ ಉಪಪ್ರಾಂಶುಪಾಲರು ಹಾಗೂ ಶಿವಶಾಂತಿ ಲಯನ್ಸ್ ಕ್ಲಬ್ ಮೊಳಹಳ್ಳಿ ಅಧ್ಯಕ್ಷ ಎಂ. ಕರುಣಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಉಪಾಧ್ಯಕ್ಷ ಗೌತಮ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿಯ ವಕೀಲರು ಹಾಗೂ ಕಾನೂನು ನೆರವು ಅಭಿರಕ್ಷಕರಾದ ರಾಘವೇಂದ್ರ ಎಸ್. ಅವರು ಮಾನವ ಕಳ್ಳ ಸಾಗಣೆ, ಆಮಿಷ ಒಡ್ಡಿ ಮಕ್ಕಳನ್ನು ವೇಶ್ಯಾವಾಟಿಕೆ ಹಾಗೂ ಬಾಲಕಾರ್ಮಿಕ ಪದ್ಧತಿಗೆ ದೂಡುವ ಪ್ರಕರಣಗಳ ಬಗ್ಗೆ ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳ ಹಕ್ಕುಗಳು, ಕಾನೂನು ನೆರವು, ಅಪ್ರಾಪ್ತ ಮಕ್ಕಳ ಲೈಂಗಿಕ ಶೋಷಣೆ ತಡೆ, ಪೋಕ್ಸೋ ಕಾಯ್ದೆ, ದೌರ್ಜನ್ಯಕ್ಕೊಳಗಾದ ಮಕ್ಕಳ ರಕ್ಷಣೆ ಹಾಗೂ ತಪ್ಪಿತಸ್ಥರಿಗೆ ಇರುವ ಕಾನೂನು ಶಿಕ್ಷೆಗಳ ಕುರಿತು ಅವರು ವಿದ್ಯಾರ್ಥಿಗಳಿಗೆ ಸರಳವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಿವಶಾಂತಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ, ರಮೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ದಿನಪಾಲ್ ಶೆಟ್ಟಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾರಾಲೀಗಲ್ ಸ್ವಯಂಸೇವಕ ರಕ್ಷಿತ್ ಕುಮಾರ್ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಪೂಜಾರಿ ಸ್ವಾಗತಿಸಿದರು. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕಿ ಹೆಲನ್ ಶಾಲೆಟ್ ವಂದಿಸಿದರು.







