ಬ್ರಹ್ಮಾವರ: ಯುವಕನೋರ್ವ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟ ಘಟನೆ ಸೆಪ್ಟೆಂಬರ್ 9ರಂದು ನಡೆದಿದೆ.
ನಡೂರು ಗ್ರಾಮದ ಬಾಲಕೃಷ್ಣ (43) ಅವರ ಅಕ್ಕನ ಮಗ ನಿಕ್ಷೇಪ ಮೃತಪಟ್ಟ ಯುವಕನಾಗಿದ್ದಾನೆ.
ಸೆಪ್ಟೆಂಬರ್ 9ರಂದು ಸಂಜೆ ಸುಮಾರು 6:45ರ ವೇಳೆಗೆ ಓದಲು ರೂಮಿಗೆ ತೆರಳಿದ್ದ ನಿಕ್ಷೇಪ ಬಳಿಕ ರೂಮಿನ ಬಾಗಿಲು ತೆರೆಯದೆ ಇದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ಈ ವೇಳೆ ಪಕ್ಕದ ಮನೆಯ ಗಣೇಶ್ ಕಾಮತ್ ಹಾಗೂ ನಿಕ್ಷೇಪನ ತಂದೆ ಸೇರಿ ಆಚಾರ್ ಅವರನ್ನು ಕರೆಸಿ ರೂಮಿನ ಬಾಗಿಲು ಒಡೆದು ಒಳಗೆ ಪ್ರವೇಶಿಸಿ ನೋಡಿದಾಗ, ನಿಕ್ಷೇಪ ನೆಲದಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ.
ಆತನ ಕುತ್ತಿಗೆಯ ಮೇಲೆ ಮಂಚದ ಒಂದು ಬದಿಯ ಕಾಲು ಇದ್ದು, ನಿಕ್ಷೇಪ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಎನ್ನಲಾಗಿದೆ.
ಕೂಡಲೇ ನಿಕ್ಷೇಪನನ್ನು ರಾತ್ರಿ ಸುಮಾರು 8:15ರ ವೇಳೆಗೆ ಬ್ರಹ್ಮಾವರದ ಪ್ರಣವ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ನಿಕ್ಷೇಪ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






