ಉಡುಪಿ; ಸರಕು ಸಾಗಟ ಲಾರಿಗೆ ಗೂಡ್ಸ್ ಟೆಂಪೋ ಹಿಂದುಗಡೆ ಗುದ್ದಿದ ಪರಿಣಾಮವಾಗಿ, ಟೆಂಪೋ ಚಾಲಕ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಕುಂದಾಪುರ ತಾಲೂಕಿನ ಕಟ್ಟಬೆಳ್ತೂರು ಗ್ರಾಮದ ಗುರುರಾಜ್ ಅವರ ಅಳಿಯ ಪ್ರಶಾಂತ ಪಿ (28) ಅವರು ಗೂಡ್ಸ್ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮೇ 31ರಂದು ಬೆಂಗಳೂರಿನಿಂದ ಸಂತೆಕಟ್ಟೆಗೆ ಬಾಡಿಗೆ ಸರಕು ಸಾಗಿಸಿಕೊಂಡು ಬರುತ್ತಿದ್ದ ವೇಳೆ ಬೆಳಿಗ್ಗೆ ಸುಮಾರು 6 ಗಂಟೆಗೆ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಸಮೀಪದ ಅಂಡರ್ಪಾಸ್ ಬಳಿ ಈ ದುರ್ಘಟನೆ ನಡೆದಿದೆ
ಲಾರಿಯನ್ನು ಅದರ ಚಾಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ನಿಲ್ಲಿಸಿದ್ದರಿಂದ, ಅದೇ ಮಾರ್ಗದಲ್ಲಿ ಬರುತ್ತಿದ್ದ ಪ್ರಶಾಂತ ಅವರ ಗೂಡ್ಸ್ ವಾಹನ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಗೂಡ್ಸ್ ವಾಹನದ ಮುಂಭಾಗ ಲಾರಿಯ ಹಿಂಭಾಗದೊಳಗೆ ನುಗ್ಗಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಶಾಂತ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ
ಸಮಾಜಸೇವಕ ನಿತ್ಯಾನಂದ ಒಳಕಾಡು, ಸಂಚಾರಿ ಠಾಣೆಯ ಪೋಲಿಸರು ಹಾಗೂ ಸ್ಥಳೀಯರು ಮೃತದೇಹವನ್ನು ಹೊರತೆಗೆದರು. ಒಳಕಾಡುವರು ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ರಕ್ಷಿಸಿಡುವ ವ್ಯವಸ್ಥೆಗೊಳಿಸಿದರು..
ಅಪಘಾತಕ್ಕೆ ಲಾರಿಯನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ನಿಲ್ಲಿಸಿದ್ದೇ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






