ಬೈಂದೂರು, ಜೂನ್ 2: ಹಾವೇರಿ ಜಿಲ್ಲೆಯ ಕುಟುಂಬವೊಂದು ಪ್ರವಾಸಕ್ಕೆ ಬಂದಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು, 17 ವರ್ಷದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಮೇಲ್ಪಂಕ್ತಿಯ ಸುಂಕದಕಟ್ಟೆ ಹೊಳೆ ಬಳಿ ನಡೆದಿದೆ.
ಮೃತ ಬಾಲಕನನ್ನು ಆಯುಷ್ (17) ಎಂದು ಗುರುತಿಸಲಾಗಿದೆ. ಹಾವೇರಿ ಜಿಲ್ಲೆಯ ನಿವಾಸಿಯಾದ ಸುಭಾಸ್ (58) ಅವರು ಕುಟುಂಬದವರೊಂದಿಗೆ ಪ್ರವಾಸ ಕೈಗೊಂಡು ಜೂನ್ 1ರಂದು ಬೆಳಿಗ್ಗೆ ಮುರ್ಡೇಶ್ವರ ದರ್ಶನ ಮುಗಿಸಿ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಈ ವೇಳೆ ಶಿರೂರು ಗ್ರಾಮದ ಸುಂಕದಕಟ್ಟೆ ಹೊಳೆ ಸೇತುವೆ ಸಮೀಪ ಊಟಕ್ಕಾಗಿ ವಾಹನ ನಿಲ್ಲಿಸಿದ್ದರು.
ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಆಯುಷ್ ಇತರ ಮಕ್ಕಳೊಂದಿಗೆ ಹೊಳೆಗೆ ನೀರು ತರಲು ತೆರಳಿದ್ದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ತಕ್ಷಣ ಸಾರ್ವಜನಿಕರು ಹಾಗೂ ಕುಟುಂಬದವರು ರಕ್ಷಿಸಿ ಚಿಕಿತ್ಸೆಗಾಗಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೂ, ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.







